ಕಲಬುರಗಿ: ನನ್ನನ್ನು ಸೋಲಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಆರ್ಎಸ್ಎಸ್ ತಂಡ ಈಗ ಪ್ರಿಯಾಂಕ್ ಖರ್ಗೆಯನ್ನು ಟಾರ್ಗೆಟ್ ಮಾಡುತ್ತಿದೆ ಎಂದು ರಾಜ್ಯಸಭೆಯ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದರು.
ಕಲಬುರಗಿಯ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಈ ಹಿಂದೆ ಸಂಸತ್ತಿನಲ್ಲಿ ಪ್ರಧಾನಿಯವರು ಮಾತನಾಡುವಾಗ ‘ಖರ್ಗೆಯವರೇ ನೀವು ಮುಂದೆ ಗೆಲ್ಲುತ್ತೀರೋ ಇಲ್ಲವೋ ಗೊತ್ತಿಲ್ಲ’ ಎಂದು ಸೂಚ್ಯವಾಗಿ ನನ್ನ ಸೋಲಿನ ಮುನ್ಸೂಚನೆ ನೀಡಿದ್ದರು.
ಬಿಜೆಪಿಯವರು ಸೈದ್ಧಾಂತಿಕ ತಳಹದಿಯ ಮೇಲೆ ರಾಜಕಾರಣ ಮಾಡುವ ಬದಲು ದ್ವೇಷ ರಾಜಕಾರಣಕ್ಕೆ ಮುಂದಾಗಿದ್ದಾರೆ ಎಂದು ದೂರಿದ್ದಾರೆ.
ಕಲಬುರಗಿಯಲ್ಲಿ ಇಡೀ ಆರ್ಎಸ್ಎಸ್ ತಂಡ ಠಿಕಾಣಿ ಹೂಡಿ ನನ್ನನ್ನು ಸೋಲಿಸುವಲ್ಲಿ ಯಶಸ್ವಿಯಾಗಿತ್ತು. ಈಗ ಅದೇ ಆರ್ಎಸ್ಎಸ್ ಪ್ರಾಯೋಜಿತ ರಾಜಕಾರಣ ಪ್ರಿಯಾಂಕ್ ಖರ್ಗೆ ಅವರನ್ನು ಟಾರ್ಗೆಟ್ ಮಾಡುವ ಹುನ್ನಾರ ನಡೆಸುತ್ತಿದ್ದು, ಅದೇ ಧಾಟಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್ ಸೋಮವಾರ ಕಲಬುರಗಿ ಪ್ರವಾಸದಲ್ಲಿರುವಾಗ ಮಾತನಾಡಿದ್ದಾರೆ ಎಂದರು.
ಇತ್ತೀಚೆಗೆ ಆರ್ಎಸ್ಎಸ್ ಪ್ರಮುಖರಾದ ಮೋಹನ್ ಭಾಗವತ್ ಕಲಬುರಗಿಯಲ್ಲಿ ಎರಡು ದಿನಗಳ ಕಾಲ ವಾಸ್ತವ್ಯ ಹೂಡಿ ದ್ವೇಷ ರಾಜಕಾರಣಕ್ಕೆ ವೇದಿಕೆ ರೂಪಿಸಿ ಹೋಗಿದ್ದಾರೆ. ಅದರ ಮುಂದುವರೆದ ಭಾಗವಾಗಿ ಕಟೀಲ್ ಕಲಬುರಗಿಯಲ್ಲಿ ಪ್ರಿಯಾಂಕ್ ಖರ್ಗೆಯವರನ್ನು ಸೋಲಿಸುವಂತೆ ಕರೆ ಕೊಟ್ಟಿದ್ದಾರೆ ಎಂದು ಹೇಳಿದರು.