ಕಲಬುರ್ಗಿ: ಅಫ್ಗಾನಿಸ್ತಾನದ ಜೊತೆಗೆ ಭಾರತ ಎರಡು ದಶಕಗಳಿಂದ ಸ್ನೇಹ ಸಂಬಂಧ ಹೊಂದಿತ್ತು. ಆದರೆ, ಈಗ ಆ ದೇಶ ನಮ್ಮ ಶತ್ರು ರಾಷ್ಟ್ರಗಳಾದ ಪಾಕಿಸ್ತಾನ ಹಾಗೂ ಚೀನಾ ಜೊತೆಗೆ ಬೆಸೆದುಕೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಆ ದೇಶದ ಕುರಿತು ಭಾರತದ ನಿಲುವನ್ನು ಪ್ರಧಾನಿ ಸ್ಪಷ್ಟಪಡಿಸಬೇಕು ಎಂದು ಶಾಸಕ ಯು.ಟಿ. ಖಾದರ್ ಒತ್ತಾಯಿಸಿದರು.
ಭಾರತವೂ ಅಲ್ಲಿ ಸಾಕಷ್ಟು ಹೂಡಿಕೆ ಮಾಡಿದೆ. ಬದಲಾದ ವ್ಯವಸ್ಥೆಯಲ್ಲಿ ಕೇಂದ್ರದ ಮುಂದಿನ ನಡೆ ಏನಿರಬೇಕು ಎಂಬ ಬಗ್ಗೆ ಕೂಲಂಕಷವಾಗಿ ಚರ್ಚೆ ಮಾಡಿ ನಿರ್ಧಾರ ಕೈಗೊಳ್ಳ ಬೇಕು ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಕುಟುಂಬವು ಆರ್ಥಿಕವಾಗಿ ತೀವ್ರ ಸಂಕಷ್ಟಕ್ಕೆ ಸಿಲುಕಿದಾಗ ಎಷ್ಟೋ ತಾಯಂದಿರು ತಮ್ಮ ತಾಳಿ ಮಾರಿ ಜೀವನ ನಡೆಸಿದ ಸ್ಥಿತಿಯನ್ನು ನಾವು ನೋಡಿದ್ದೇವೆ. ಈಗ ಭಾರತವೂ ಇಂಥದ್ದೇ ಪರಿಸ್ಥಿತಿ ಅನುಭವಿಸುತ್ತಿದೆ. ಸ್ಪಷ್ಟವಾದ ಆರ್ಥಿಕ ನೀತಿ ಇಲ್ಲದ ಕಾರಣ ಸಣ್ಣಸಣ್ಣ ರಾಷ್ಟ್ರಗಳ ಮುಂದೆಯೂ ನಾವು ಕೈಚಾಚುವಂತಾಗಿದೆ ಎಂದೂ ದೂರಿದರು.