ಅಫಜಲಪುರ: ತಾಲೂಕಿನ ಶಿರವಾಳ ಗ್ರಾಮದ ಸರಕಾರಿ ಶಾಲೆಗೆ ಮಕ್ಕಳು ತೆರಳಬೇಕಾದರೆ ಮೊದಲು ಕೆಸರು ಗದ್ದೆಯನ್ನು ದಾಟುವಂತಹ ಪರಸ್ಥಿತಿ ನಿರ್ಮಾಣವಾಗಿದೆ. ಹಲವು ವರ್ಷಗಳಿಂದ ಶಿರವಾಳ ಗ್ರಾಮದ ಮುಖ್ಯರಸ್ತೆ ಸ್ವಲ್ಪ ಮಳೆ ಬಂದರೆ ಸಾಕು ಕೆಸರು ಗದ್ದೆಯಾಗಿ ಮಾರ್ಪಡುತ್ತದೆ.ಸಮಸ್ಯೆ ಬಗ್ಗೆ ಹತ್ತಾರು ಬಾರಿ ಗ್ರಾಮ ಪಂಚಾಯತಿ ಆಡಳಿತ ಮಂಡಳಿಯ ಗಮನಕ್ಕೂ ಹಾಗೂ ತಾಲೂಕು ಅಧಿಕಾರಿಗಳ ಗಮನಕ್ಕೂ ತಂದರೂ ಯಾವುದೇ ಪ್ರಯೋಜನವಾಗಿಲ್ಲ.
ಸುದ್ದಿಗಾರರೊಂದಿಗೆ ಮಾತನಾಡಿದ ಗ್ರಾಮದ ಮುಖಂಡ ರಾಜಕುಮಾರ ಉಕಲಿ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಾಗಿನಿಂದ ನಮ್ಮೂರಿನ ರಸ್ತೆಯ ಸಮಸ್ಯೆ ಹಾಗೆಯೇ ಇದೆ. ಸರಕಾರಿ ಶಾಲೆಗೆ ಹೋಗಲು ಗ್ರಾಮದ ಮಕ್ಕಳು ಇದೆ ರಸ್ತೆಯಲ್ಲೆ ಹೋಗಬೇಕು.ವಾಹನಗಳೇ ಓಡಾಡದ ರಸ್ತೆಯಲ್ಲಿ ಪುಟ್ಟ ಮಕ್ಕಳು ಹೇಗೆ ನಡೆದುಕೊಂಡು ಹೋಗಬೇಕು ಎಂಬುದನ್ನು ಅಧಿಕಾರಿಗಳು ಯೋಚಿಸಬೇಕು.ತಾವು ಎಸಿ ರೂಮಿನಲ್ಲಿ ಕುಳಿತು ತಮ್ಮ ಮಕ್ಕಳಿಗೆ ಇಂಗ್ಲಿಷ್ ಮಾಧ್ಯಮ ಶಾಲೆಗಳಿಗೆ ಕಳಿಹಿಸುವ ನಿಮಗೆ ಗ್ರಾಮೀಣ ಭಾಗದ ಸರಕಾರಿ ಶಾಲಾ ಮಕ್ಕಳ ಪರಸ್ಥಿತಿ ಅರ್ಥವಾಗುವುದಿಲ್ಲ. ಕೆಸರು ಗದ್ದೆಯಂತ್ತಿರುವ ಈ ರಸ್ತೆಯಿಂದಲೇ ಗ್ರಾಮದ ಹೆಣ್ಣು ಮಕ್ಕಳು ಶೌಚಾಲಯಕ್ಕೆ ತೆರಳಬೇಕು.ಅಳ್ಳಗಿ ಗ್ರಾಮಕ್ಕೆ ಹೋಗುವ ಮುಖ್ಯ ರಸ್ತೆಯೂ ಇದೆ ಆಗಿದೆ. ಅದಲ್ಲದೇ ಸರಕಾರಿ ಶಾಲೆ ಇದೆ ರಸ್ತೆಯ ಪಕ್ಕದಲ್ಲಿರುವುದರಿಂದ ಮಕ್ಕಳು ಕೆರಸು ಗದ್ದೆಯಲ್ಲೇ ನಡೆದುಕೊಂಡು ಶಾಲೆಗೆ ಹೋಗಬೇಕು.ಬೇರೆ ಗ್ರಾಮಗಳಿಂದ ಬರುವ ಶಿಕ್ಷಕರು ಎಷ್ಟೋ ಬಾರಿ ಕೆಸರಿನ ರಸ್ತೆಯಲ್ಲಿ ಬಿದ್ದಿದ್ದಾರೆ. ಇಷ್ಟೇಲ್ಲ ಸಮಸ್ಯೆಗಳಾಗುತ್ತಿದ್ದರೂ ಅಧಿಕಾರಿಗಳು ಜನಪ್ರತಿನಿಧಿಗಳು ನಿದ್ದೆಗೆ ಜಾರಿರುವುದು ಗ್ರಾಮಸ್ಥರ ಕೋಪಕ್ಕೆ ಎಡೆಮಾಡಿಕೊಡುತ್ತಿದೆ.ಕೂಡಲೇ ರಸ್ತೆ ನಿರ್ಮಾಣ ಮಾಡಿ ಸಂಚಾರಕ್ಕೆ ಮತ್ತು ಶಾಲಾ ಮಕ್ಳಳಿಗೆ ಶಾಲೆಗೆ ತೆರಳಲು ಅನುವು ಮಾಡಿಕೊಡದಿದ್ದರೆ ಉಗ್ರವಾದ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.