ಕಲಬುರಗಿ: ಪೊಲೀಸ್​ ಠಾಣೆಯಲ್ಲೇ (Police Station) ಇಸ್ಪೀಟ್​ ಆಡಿದ್ದ ಐವರು ಸಿಬ್ಬಂದಿಯನ್ನು ಅಮಾನತು ಮಾಡಿ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ (SP) ಅಡ್ಡೂರು ಶ್ರೀನಿವಾಸಲು ಆದೇಶ ಹೊರಡಿಸಿದ್ದಾರೆ.

ಚಿತ್ತಾಪುರ (Chittapur) ತಾಲೂಕಿನ ವಾಡಿ ಠಾಣೆಯ ಎಸ್​ಎಸ್​ಐ ಮಹಿಮೂದ್ ಮಿಯಾ, ಹೆಡ್​ಕಾನ್ಸಟೇಬಲ್ ನಾಗರಾಜ್, ಸಾಯಿಬಣ್ಣ, ಇಮಾಮ್, ಪಿಸಿ ನಾಗಭೂಷಣ್ ಅಮಾನತುಗೊಂಡ ಅಧಿಕಾರಿಗಳು.

ಈ ಪ್ರಕರಣ ಬೇಲಿಯೇ ಎದ್ದು ಹೊಲ ಮೇದಂತಿದೆ. ಹೊರಗಡೆ ಸಾರ್ವಜನಿಕರು ಇಸ್ಪೀಟ್ ಆಡಿದರೆ, ದಾಳಿ ಮಾಡಿ ಕೇಸ್ ಫಿಟ್ ಮಾಡುವ ಪೊಲೀಸರೇ, ಕರ್ತವ್ಯ, ಜವಬ್ದಾರಿ ಮರೆತು ಠಾಣೆಯಲ್ಲೇ ಇಸ್ಪೀಟ್ ಆಡಿರುವುದು ಖೇದರದ ಸಂಗತಿಯಾಗಿದೆ.

ವಾಡಿ ಪೊಲೀಸ್ ಠಾಣೆಯ ಮೊದಲನೇ ಅಂತಸ್ತಿನಲ್ಲಿ, ಖಾಕಿ ಬಟ್ಟೆಯಲ್ಲೇ ನಾಲ್ಕೈದು ಜನ ಪೊಲೀಸರು ಸೇರಿಕೊಂಡು ಇಸ್ಪೀಟ್ ಆಟ ಆಡುತ್ತಿದ್ದ ವಿಡಿಯೋ ಮಂಗಳವಾರ (ಮಾ.19) ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರ​ಲ್​ ಆಗಿತ್ತು. ಇದು ಪೊಲೀಸ್​ ಇಲಾಖೆ ತಲೆ ತಗ್ಗಿಸುವ ಸಂಗತಿಯಾಗಿದೆ.

ಈ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು ಐವರು ಸಿಬ್ಬಂದಿಯನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಅಲ್ಲದೇ, ಈ ಬಗ್ಗೆ ಇನ್ನು, ಪೊಲೀಸರು ಆಗಾಗ ಠಾಣೆಯಲ್ಲಿ ಇಸ್ಪೀಟ್ ಆಡುತ್ತಿದ್ದರು ಎಂದು ತಿಳಿದುಬಂದಿದೆ. ಪ್ರಕರಣ ಸಂಬಂಧ ಎಸ್​ಪಿ ಅಡ್ಡೂರು ಶ್ರೀನಿವಾಸಲು ಅವರು ಕಾರಣ ಕೇಳಿ ವಾಡಿ ಠಾಣೆ ಪಿಎಸ್‌ಐ ತಿರುಮಲೇಶ್​ ಅವರಿಗೆ ನೋಟಿಸ್​ ನೀಡಿದ್ದಾರೆ.