ಕಲಬುರಗಿ : ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ಸೇರಿದ ಸರ್ಕಾರಿ ಬಸ್‌ ಒಂದರ ಹೆಡ್‌ಲೈಟ್‌ಗಳು ಕೆಟ್ಟುಹೋಗಿದ್ದರೂ, ಚಾಲಕ ಮೊಬೈಲ್ ಟಾರ್ಚ್‌ ಬೆಳಕಿನಲ್ಲೇ ರಾತ್ರಿ ವೇಳೆ ಬಸ್ ಚಲಾಯಿಸಿದ್ದಾನೆ.

ಕಲಬುರಗಿಯಿಂದ ಚಿಂಚೋಳಿಗೆ ಬರುವ ಬಸ್ಸಿನ‌ ಹೆಡ್‌ಲೈಟ್‌ನ‌ ಮಂದ ಬೆಳಕಿನ‌ ಕಾರಣ ಮೊಬೈಲ್‌ ಟಾರ್ಚ್‌ ಹಾಕಿ‌ಕೊಂಡು ಬಸ್ ಓಡಿಸಲಾಗಿದೆ. ಈ ಭೀಕರ ಬೇಜವಾಬ್ದಾರಿತನದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಬಸ್ಸಿನಲ್ಲಿ ಹತ್ತಾರು ಪ್ರಯಾಣಿಕರು ಪ್ರಯಾಣಿಸುತ್ತಿದ್ದರೂ, ಚಾಲಕ ಸ್ಟೀರಿಂಗ್ ಪಕ್ಕದಲ್ಲೇ ಮೊಬೈಲ್ ಟಾರ್ಚ್ ಆನ್ ಮಾಡಿಟ್ಟುಕೊಂಡು ಹೆದ್ದಾರಿಯಲ್ಲಿ ಬಸ್ ಓಡಿಸಿದ್ದಾನೆ. ತಾಂತ್ರಿಕ ದೋಷ ಕಂಡುಬಂದಾಗ ಬಸ್ಸನ್ನು ಸುರಕ್ಷಿತ ಸ್ಥಳದಲ್ಲಿ ನಿಲ್ಲಿಸಿ ಪರ್ಯಾಯ ವ್ಯವಸ್ಥೆ ಕಲ್ಪಿಸುವ ಬದಲು, ಪ್ರಯಾಣಿಕರ ಪ್ರಾಣವನ್ನು ಅಪಾಯಕ್ಕೆ ದೂಡಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿ ಕಂಡುಬಂದಿದೆ.

ವಿಡಿಯೋ ವೈರಲ್ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಸಾರಿಗೆ ಸಂಸ್ಥೆಯ ಹಿರಿಯ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ. ಕರ್ತವ್ಯ ಲೋಪ ಎಸಗಿದ ಚಾಲಕನನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ. ಅಷ್ಟೇ ಅಲ್ಲದೆ, ಬಸ್ ರಸ್ತೆಗಿಳಿಯುವ ಮುನ್ನ ಹೆಡ್‌ಲೈಟ್ ತಪಾಸಣೆ ನಡೆಸದ ಮೆಕ್ಯಾನಿಕಲ್ ವಿಭಾಗದ ತಾಂತ್ರಿಕ ಸಿಬ್ಬಂದಿಗೂ ಕಾರಣ ಕೇಳಿ ಇಲಾಖೆಯು ನೋಟಿಸ್ ಜಾರಿ ಮಾಡಿದೆ.