ಕಲಬುರಗಿ: ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ದಯಾನಂದ ದೊಡ್ಮನಿ ಅವರಿಗೆ ನೀಡಿ ಎಂದು ಎಸ್.ಸಿ ಎಸ್.ಟಿ ಘಟಕದ ಮಾಜಿ ತಾಲೂಕು ಅಧ್ಯಕ್ಷ ಭಗವಂತ ವಗ್ಗೆ ಆಗ್ರಹಿಸಿದರು.
ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಪ್ರಮುಖ ಪಾತ್ರ ವಹಿಸಿದ ದಯಾನಂದ ದೊಡ್ಮನಿ ಅವರು ಪಕ್ಷದಲ್ಲಿ ನಿಷ್ಠೆಯಿಂದ ಕೆಲಸ ಮಾಡಿದ್ದಾರೆ.
ಅದಲ್ಲದೇ ಇಲ್ಲಿಯವರೆಗೆ ಜಿಲ್ಲಾ ಕಾಂಗ್ರೆಸ್ ಕಮಿಟಿಯಲ್ಲಿ ಅಫಜಲಪುರ ತಾಲೂಕಿನ ಯಾರೊಬ್ಬ ಕಾಂಗ್ರೆಸ್ ನಾಯಕರಿಗೂ ನೀಡಿಲ್ಲ. ಅದರಲ್ಲಿ ವಿಶೇಷವಾಗಿ ದಲಿತ ಸಮುದಾಯದ ಮುಖಂಡ ದೊಡ್ಮನಿ ಅವರಿಗೆ ನೀಡಬೇಕು.
ಈ ಬಾರಿ ವಿಧಾನ ಪರಿಷತ್ ಸ್ಥಾನಕ್ಕೆ ಆಯ್ಕೆಯಾದ ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಜಗದೇವ ಗುತ್ತೇದಾರ ಅವರಿಂದ ತೆರುವಾದ ಸ್ಥಾನಕ್ಕೆ ದಯಾನಂದ ದೊಡ್ಮನಿ ಅವರು ಸೂಕ್ತ ವ್ಯಕ್ತಿಯಾಗಿದ್ದು, ಅವರನ್ನು ಜಿಲ್ಲಾಧ್ಯಕ್ಷರನ್ನಾಗಿ ಮಾಡಿದರೆ ಸಾಮಾಜಿಕ ನ್ಯಾಯ ಸಿಕ್ಕಂತಾಗುತ್ತದೆ.
ಯಾವುದೇ ಅಧಿಕಾರ ಇಲ್ಲದಿದ್ದರೂ ಬಡವರ ಮಧ್ಯೆ ಇದ್ದು ಹತ್ತು ಹಲವು ಕೆಲಸಗಳನ್ನು ಮಾಡುತ್ತಿದ್ದಾರೆ.ದೀನದಲಿತರೊಂದಿಗೆ ಸ್ನೇಹಮಯಿಯಾಗಿ ಎಲ್ಲಾ ರೀತಿಯ ಸಹಾಯ ಮಾಡುತ್ತ ಬಂದಿರುವ ದಯಾನಂದ ದೊಡ್ಮನಿ, ಇಲ್ಲಿಯವರೆಗೆ ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಸ್ಥಾನಕ್ಕೆ ಬೇಡಿಕೆ ಈಡದೇ ನಿಸ್ವಾರ್ಥ ಸೇವೆ ಸಲ್ಲಿಸಿದ್ದಾರೆ.
ಜಿಲ್ಲೆಯ 9 ಕ್ಷೇತ್ರಗಳಲ್ಲಿ ಚಿರಪರಿಚಿತರಾಗಿರುವ ದೊಡ್ಮನಿ ಅವರು ಕಾಂಗ್ರೆಸ್ ವರಿಷ್ಠರು ಸೇರಿದಂತೆ ಜಿಲ್ಲೆಯ ಎಲ್ಲಾ ಮುಖಂಡರೊಂದಿಗೆ ಅನೋನ್ಯವಾಗಿದ್ದಾರೆ. ಜಿಲ್ಲೆಯಲ್ಲಿ ಜಾತ್ಯತೀತ ನಾಯಕರಿಗೆ ಉತ್ತಮ ಉದಾಹರಣೆ ಎಂದರೆ ದಯಾನಂದ ದೊಡ್ಮನಿ ಅವರಾಗಿದ್ದಾರೆ.
ಇಂತಹ ಅತ್ಯುತ್ತಮ ವ್ಯಕ್ತಿತ್ವಯುಳ್ಳ ನಾಯಕರಿಗೆ ಸೂಕ್ತ ಸ್ಥಾನಮಾನ ನೀಡದಿದ್ದರೆ ಸಾಮಾಜಿಕ ನ್ಯಾಯಕ್ಕೆ ದ್ರೋಹ ಬಗೆದಂತಾಗುತ್ತದೆ. ನಮಗೆ ಕಾಂಗ್ರೆಸ್ ಪಕ್ಷದ ವರಿಷ್ಠರಲ್ಲಿ ಅತಿಯಾದ ನಂಬಿಕೆ ಇರುವುದರಿಂದ ಈ ಬಾರಿ ದಯಾನಂದ ದೊಡ್ಮನಿ ಅವರಿಗೆ ಜಿಲ್ಲಾಧ್ಯಕ್ಷ ಸ್ಥಾನ ನೀಡುತ್ತಾರೆ ಎಂಬ ಅತಿಯಾದ ವಿಶ್ವಾಸವಿದೆ.ವರಿಷ್ಠರು ಸೂಕ್ತ ತೀರ್ಮಾನ ತಗೆದುಕೊಂಡು ಸೂಕ್ತ ವ್ಯಕ್ತಿ ದಯಾನಂದ ಅವರಿಗೆ ಜಿಲ್ಲಾಧ್ಯಕ್ಷ ಸ್ಥಾನ ನೀಡಬೇಕು ಎಂದು ಮನವಿ ಮಾಡಿದರು. ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ನಾಗೇಶ ಹೊಸ್ಮನಿ, ಖಾಜಪ್ಪ ಹೊಸ್ಮನಿ ಉಪಸ್ಥಿತರಿದ್ದರು.