ಕಲಬುರಗಿ: ರಾಜ್ಯದಲ್ಲಿ ಸಿಎಂ ಬದಲಾವಣೆ, ಮೂರು ಜನ ಉಪಮುಖ್ಯಮಂತ್ರಿ ನೇಮಕ ಮಾಡುವ ಕುರಿತು ಮಾತನಾಡುವುದೇ ನಾನ್ ಸೆನ್ಸ್ ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ್ ರಾಯರೇಡ್ಡಿ ಹೇಳಿದರು.ಕೆಕೆಆರ್ಡಿಬಿ ಸಭೆಯಲ್ಲಿ ಭಾಗವಹಿಸಲು ಆಗಮಿಸಿದ್ದ ಅವರು, ಸುದ್ದಿಗಾರರೊಂದಿಗೆ ಮಾತನಾಡಿದರು.ಬದಲಾವಣೆ ವಿಚಾರ ಅನಾವಶ್ಯಕ. ಚಂದ್ರಶೇಖರ ಸ್ವಾಮೀಜಿ ಹೇಳಿರುವುದು ಸರಿಯಲ್ಲ. ಸ್ವಾಮೀಜಿಯಾದವರು ಮುಖ್ಯಮಂತ್ರಿ ಕೊಡಿ ಎಂದು ಹೇಳಲು ಯಾರು ಇವರು ಎಂದು ಪ್ರಶ್ನಿಸಿದರು.

ಇವರೇನು ನಮ್ಮ‌ಪಕ್ಷದ ಶಾಸಕಾಂಗದ ನಾಯಕರೇ? ಹೈಕಮಾಂಡಾ? ಇವರು ಸ್ವಾಮೀಜಿ ಅವರು ಧರ್ಮ‌ ಚಿಂತನೆಯಲ್ಲಿ‌ ಇರಬೇಕು ಎಂದರು.

ಇಂತಹ ಹುದ್ದೆಗಳ ಬಗ್ಗೆ ಸಾರ್ವಜನಿಕವಾಗಿ ಚರ್ಚೆ ಮಾಡುವುದು ಸರಿಯಲ್ಲ. ಇದು ಧಾರ್ಮಿಕ ಅಶಿಸ್ತು ತೋರಿಸುತ್ತದೆ. ಸಿಎಂ ಸಿದ್ದರಾಮಯ್ಯ ಒಳ್ಳೆಯ ಮುಖ್ಯಮಂತ್ರಿ. ಇನ್ನೂ ನಾಲ್ಕು ವರ್ಷ ಬದಲಾವಣೆ ಮಾಡದಿದ್ದರೆ ರಾಜ್ಯಕ್ಕೆ ಅನುಕೂಲವಾಗುತ್ತದೆ. ಸಿದ್ದರಾಮಯ್ಯರನ್ನ ಇಳಿಸಲು ಆಗುವುದಿಲ್ಲ ಎಂದರು‌.

ಜಾತಿವಾರು ಡಿಸಿಎಂ ನೀಡುವ ವಿಚಾರವಾಗಿ‌ ಪ್ರತಿಕ್ರಿಯಿಸಿ, ಮೂರು ಡಿಸಿಎಂ ಮಾಡಬಹುದು. ಇನ್ನೂ 32 ಜನರಿಗೆ ಮಾಡಬಹುದು. ಸಚಿವರಾದವರು ಎಲ್ಲರೂ ಡಿಸಿಎಂ ಆಗಬಹುದು. ಆ ಸ್ಥಾನದಲ್ಲಿ ಏನು ಪವರ್ ಇಲ್ಲ. ಇದು ವೈಭವೀಕರಣದ ಹುದ್ದೆ ಅಷ್ಟೆ ಕಾನೂನಿನಲ್ಲಿ ಬೆಲೆ ಇಲ್ಲ‌ ಎಂದರು.

ಉಪ ಮುಖ್ಯಮಂತ್ರಿ ಎನ್ನುವುದು ಒಂದು ಬೆಲೆ ಜಾಸ್ತಿ ಬರುತ್ತದೆಂಬ ಕಾರಣಕ್ಕೆ ಕೇಳುತ್ತಿರುವುದು ಅಷ್ಟೆ. ಈ ವಿಚಾರದ ಬಗ್ಗೆ ಚರ್ಚೆ ಮಾಡುವವರು ನಾನ್ ಸೆನ್ಸ್ ಅಷ್ಟೆ‌ ಎಂದರು.