ಕಲಬುರಗಿ: ರಾಜ್ಯ ಸರಕಾರ ಎಲ್ಲಾ ರಂಗಗಳಲ್ಲಿ ವಿಫಲವಾಗಿದ್ದು, ಒಂದು ವರ್ಷದ ಸಾಧನೆ ಶೂನ್ಯವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟೀಕಿಸಿದರು. ವಿಧಾನ ಪರಿಷತ್ ಚುನಾವಣಾ ಪ್ರಚಾರ ಅಂಗವಾಗಿ ಕಲಬುರಗಿಗೆ ಆಗಮಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

“ಕಳೆದ ಒಂದು ವರ್ಷದ ಅವಧಿಯಲ್ಲಿ ರಾಜ್ಯ ಸರಕಾರ ಒಂದೇ ಒಂದು ಹೊಸ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿಲ್ಲ‌. ಶಾಸಕರಿಗೆ ಅನುದಾನ ಮರೀಚಿಕೆಯಾಗಿರುವುದು, ರಾಜ್ಯದಿಂದ ಮೊದಲು ಬರ ಪರಿಹಾರ ನೀಡದೇ ಕೇಂದ್ರ ಸರಕಾರದ ಕಡೆಗೆ ಬೊಟ್ಟು ಮಾಡಿರುವುದು,

ರಾಜ್ಯದಲ್ಲಿ ಹೆಚ್ಚಿದ ಕೊಲೆಗಳು, ಎಲ್ಲೇ ಮೀರಿದ ಡ್ರಗ್ಸ್ ಮಾಫಿಯಾ, ಬಾಲ ಬಿಚ್ಚಿದ ರೌಡಿಗಳು, ಇದಕ್ಕೆ ರಾಜಕೀಯ ಕುಮ್ಮಕ್ಕು, ರೇವ್ ಪಾರ್ಟಿ ಮೇಲೆ ದಾಳಿ, ಕುಸಿದ ಶೈಕ್ಷಣಿಕ ರಂಗ, ನಾಯಕತ್ವಕ್ಕಾಗಿ ಮುಸುಕಿನ ಗುದ್ದಾಟವು ಸರಕಾರ ವಿಫಲತೆಗೆ ಸಾಕ್ಷಿಗಳಾಗಿವೆ” ಎಂದು ವಾಗ್ದಾಳಿ ನಡೆಸಿದರು.

ರಾಜ್ಯದ ಆರ್ಥಿಕ ತೂ ಹೇಳದಂತಿದೆ. ಬಜೆಟ್ ನಲ್ಲಿ ಘೋಷಣೆ ಕಾಮಗಾರಿಗಳ ಪರಿಶೀಲನೆ ಸಹ ಮಾಡಲಿಕ್ಕಾಗಿಲ್ಲ.‌ ಒಟ್ಟಾರೆ ರಾಜ್ಯ ಸರಕಾರ ಅಭಿವೃದ್ಧಿಯಲ್ಲಿ ಹತ್ತು ವರ್ಷ ಹಿಂದಕ್ಕೆ ಹೋಗಿದೆ. ತಮ್ಮ ಅವಧಿಯಲ್ಲಿ ಪ್ರಾರಂಭಿಸಿದ ವಿವೇಕ ಕಾರ್ಯಕ್ರಮದಡಿಯಲ್ಲಿ 9000 ಶಾಲಾ ಕೊಠಡಿಗಳ ನಿರ್ಮಾಣವು ಅನುದಾನ ಕೊರತೆಯಿಂದ ಅರ್ಧಕ್ಕೆ ನಿಂತಿವೆ ಎಂದು ಬೊಮ್ಮಾಯಿ ಟೀಕಿಸಿದರು.