ಕಲಬುರಗಿ: ಮಹಿಳಾ ಪಿಎಸ್‍ಐ ಮೇಲೆ ಹಲ್ಲೆ ಎಸಗಿ ಪರಾರಿಯಾಗುತ್ತಿದ್ದ ಕೊಲೆ ಆರೋಪಿಯ ಕಾಲಿಗೆ ಪೊಲೀಸರು ಗುಂಡೇಟು ನೀಡಿದ ಘಟನೆ ಕಲಬುರಗಿಯಲ್ಲಿ ನಡೆದಿದೆ.

ಗ್ರಾಮ ಪಂಚಾಯತಿ ಮಾಜಿ ಸದಸ್ಯ ವಿಶ್ವನಾಥ್ ಜಮಾದರ್ ಹತ್ಯೆ ಪ್ರಕರಣದ ಆರೋಪಿ ಲಕ್ಷ್ಮಣ್ ಪೂಜಾರಿಯನ್ನು ಬಂಧಿಸಲು ಪೊಲೀಸರು ತೆರಳಿದ್ದರು. ಈ ವೇಳೆ ಆರೋಪಿ ಚಾಕುವಿನಿಂದ ನಿಂಬರ್ಗಾ ಠಾಣೆ ಪಿಎಸ್‍ಐ ಇಂದುಮತಿಯವರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದಾನೆ.

ಈ ವೇಳೆ ಅಫಜಲ್‍ಪುರ ಠಾಣೆ ಪಿಎಸ್‍ಐ ಸೋಮಲಿಂಗ ಒಡೆಯರ್ ಆರೋಪಿಯ ಬಲಗಾಲಿಗೆ ಮೂರು ಸುತ್ತು ಗುಂಡು ಹಾರಿಸಿದ್ದಾರೆ. ಆರೋಪಿ ಲಕ್ಷ್ಮಣ್ ಪೂಜಾರಿಯನ್ನು ನಗರದ ಜಿಮ್ಸ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಇತ್ತ ಗಾಯಾಳು ಪಿಎಸ್‍ಐ ಇಂದುಮತಿಯವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.