ಬೆಂಗಳೂರು: ರಾಜ್ಯಾದ್ಯಂತ ಮಾರಾಟ ಮಾಡುತ್ತಿರುವ ಕಾಟನ್ ಕ್ಯಾಂಡಿ ಹಾಗೂ ಗೋಬಿ ಮಂಚೂರಿಯನ್ ಮಾದರಿ ಗಳಲ್ಲಿ ಆರೋಗ್ಯಕ್ಕೆ ಮಾರಕವಾದ ಅಂಶ ಹಾಗೂ ಬಳಕೆಯ ಬಣ್ಣ ಸೇರಿದಂತೆ ವ್ಯಸನಕಾರಿ ರಾಸಾಯನಿಕ ಅಂಶಗಳು ಪತ್ತೆಯಾಗಿದ್ದು, ಈ ಅಸುರಕ್ಷಿತ ವಸ್ತುಗಳನ್ನು ಬಳಕೆ ಮಾಡದಂತೆ ಆರೋಗ್ಯ ಇಲಾಖೆಯು ನಿರ್ಬಂಧ ಹೇರಲು ಮುಂದಾಗಿದೆ.
ಈ ಬಗ್ಗೆ ಇಂದು (ಮಾ.11) ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಹತ್ವದ ಸುದ್ದಿಗೋಷ್ಠಿಗೂ ಮುಂದಾಗಿದ್ದಾರೆ. ಕರ್ನಾಟಕ ರಾಜ್ಯ ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ವಿಭಾಗವು, ಕಾಟನ್ ಕ್ಯಾಂಡಿ ಮತ್ತು ಗೋಬಿ ಮಂಚೂರಿ ಮಾದರಿಯನ್ನು ಸಂಗ್ರಹಿಸಿದೆ.
ಇವುಗಳಲ್ಲಿ ಕೃತಕ ಬಣ್ಣಗಳ ಬಳಸಿರುವುದು ಪತ್ತೆಯಾಗಿದೆ. ಆ ಹಿನ್ನೆಲೆಯಲ್ಲಿ, ಇಂದು ಮಹತ್ವದ ನಿರ್ಧಾರ ಹೊರ ಬೀಳುವ ಸಾಧ್ಯತೆ ಇದೆ. ಮಂಚೂರಿ ಹಾಗೂ ಕಾಟನ್ ಕ್ಯಾಂಡಿಯಲ್ಲಿ ಕೃತಕ ಬಣ್ಣ ಬೆರಕೆ ಹಿನ್ನೆಲೆ ಈ ಹಿಂದೆ ವಿವಿಧ ಸ್ಯಾಂಪಲ್ ಗಳ ಪರೀಕ್ಷೆಗೆ ನೀಡಲಾಗಿತ್ತು. ಸದ್ಯ ಪರೀಕ್ಷೆಯ ವರದಿ ಬಂದ ಹಿನ್ನೆಲೆ ಈ ಬಗ್ಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸುದ್ಧಿಗೋಷ್ಠಿ ನಡೆಸಲು ಮುಂದಾಗಿದ್ದು ರಾಜ್ಯದಲ್ಲಿ ಅಸುರಕ್ಷಿತ ಗೋಬಿ ಹಾಗೂ ಕ್ಯಾಂಡಿ ಕೂಡ ಬ್ಯಾನ್ ಆಗುವ ಸಾಧ್ಯತೆ ಇದೆ.