ಗದಗ: ಕಾರು ಚಾಲಕನ ನಿಯಂತ್ರಣ ತಪ್ಪಿ ಬಸ್ಸಿಗೆ ಡಿಕ್ಕಿಯಾಗಿರುವ ಘಟನೆ ಗದಗದ ಹರ್ಲಾಪುರ ಗ್ರಾಮದ ಬಳಿ ನಡೆದಿದೆ. ಬಸ್ಗೆ ಕಾರು ಡಿಕ್ಕಿಯಾದ ರಭಸಕ್ಕೆ ಕಾರು ನುಜ್ಜುಗುಜ್ಜಾಗಿದೆ. ಹಾವೇರಿ ಮೂಲದ ಮೂವರು ದುರಂತ ಅಂತ್ಯ ಕಂಡಿದ್ದಾರೆ.
ಕೊಪ್ಪಳದಿಂದ ಗದಗ ಕಡೆಗೆ ಬರುತ್ತಿದ್ದ ಕಾರು ನಿಯಂತ್ರಣ ತಪ್ಪಿ ಬಸ್ಸಿಗೆ ಡಿಕ್ಕಿ ಹೊಡೆದಿದೆ. ಹಾವೇರಿ ಮೂಲದ 29 ವರ್ಷದ ಅರ್ಜುನ್ ನೆಲ್ಲೂರು,40 ವರ್ಷದ ರವಿ ನೆಲ್ಲೂರು, 32 ವರ್ಷದ ಈರಣ್ಣ ಉಪ್ಪಾರ ಮೃತ ದುರ್ದೈವಿಗಳು.
ಇವರು ಕಾರಿನಲ್ಲಿ ಕೊಪ್ಪಳದಿಂದ ಗದಗ ಕಡೆಗೆ ಬರುತ್ತಿದ್ದರು.ಆ ವೇಳೆ ಕಾರು ಚಾಲಕನ ನಿಯಂತ್ರಣ ತಪ್ಪಿ ಪಣಜಿಯಿಂದ ಹೊಸಪೇಟೆ ಕಡೆಗೆ ಹೊರಟಿದ್ದ ಗೋವಾ ಸಾರಿಗೆ ಬಸ್ಗೆ ಡಿಕ್ಕಿಯಾಗಿದೆ.
ಅರ್ಜುನ್ ಹಾಗೂ ರವಿ ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ಹುನಗುಂದ ಗ್ರಾಮದ ನಿವಾಸಿಗಳಾಗಿದ್ದಾರೆ. ಅರ್ಜುನ್ ಹಾಗೂ ಈರಣ್ಣ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರು. ಕಾರಿನಲ್ಲಿದ್ದ ಮೂವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಸ್ಥಳಕ್ಕೆ ಗದಗ ಗ್ರಾಮೀಣ ಪೊಲೀಸ್ ಠಾಣೆ ಸಿಪಿಐ ಭೇಟಿ ಪರಿಶೀಲನೆ ನಡೆಸಿದ್ದಾರೆ.

