ಧಾರವಾಡ: ಅದೂ ವಿದ್ಯಾಕಾಶಿ ಎಂದು ಖ್ಯಾತಿ ಪಡೆದಿರುವ ನಗರ, ಆ ನಗರದಲ್ಲಿ ಇಂತಹದೊಂದು ಘಟನೆ ನಡೆಯುತ್ತದೆ ಎಂದು ಯಾರೂ ಕೂಡಾ ಊಹೇ ಮಾಡಿರಲಿಲ್ಲ. ಈ ಘಟನೆ ಸುದ್ದಿ ಹೊರ ಬರುತ್ತಿದಂತೆ ನಗರದ ಜನತೆ ಬೆಚ್ಚಿಬಿದಿದ್ದಾರೆ. ವೈದ್ಯ ಬಾರದ ಲೋಕಕ್ಕೆ ಹೋದ್ರೆ, ಕರುಳು ಬಳಿ ಏನೂ ತಿಳಿಯದ ಮಗು ಈಗ ಆಸ್ಪತ್ರೆಯಲ್ಲಿ ಜೀವನ ಮರಣ ಹೋರಾಟ ಮಾಡುತ್ತಿದೆ.

ಒಂದು ಕಡೆ ರಕ್ತದ ಮಡುವಿನ ಬಿದ್ದು ಖಾಸಗಿ ಆಸ್ಪತ್ರೆಯ ವೈದ್ಯ ಪ್ರಾಣ ಕಳೆದುಕೊಂಡಿದ್ದಾರೆ. ಇನ್ನೊಂದು ಕಡೆ ತೀವ್ರ ರಕ್ತ ಸ್ರಾವದಿಂದ ಜೀವನ್ಮರಣ ಹೋರಾಟದಲ್ಲಿ ಮನೆಯ ರೂಮಿನಲ್ಲಿ ಲೋಕ ಜ್ಞಾನ ಅರಿಯದ ಮಗು ಬಿದ್ದಿದೆ. ಮಗದೊಂದು ಕಡೆ ಮಗುವಿನ ಜೀವ ಇದೆ ಎಂದು ಮಗುವನ್ನು ಮಡಿಲಿನಲ್ಲಿ ಎತ್ತಿಕೊಂಡು ಆಸ್ಪತ್ರೆಗೆ ದಾಖಲಿಸಲು ಪೊಲೀಸ್ ಕಮಿಷನರ್ ಮುಂದಾಗಿದ್ದಾರೆ.

ಎಸ್ ಈ ಎಲ್ಲ ದೃಶ್ಯಗಳಿಗೆ ಇಂದು ಧಾರವಾಡದ ಬಾರಾಕೋಟ್ರೀಯ ಪವನ ಆಂಗ್ಲ ಮಾಧ್ಯಮ ಶಾಲೆಯ ಬಳಿ ಇರುವ ರಂಕಾ ಅಪಾರ್ಟ್ಮೆಂಟ್‌ ಸಾಕ್ಷಿಯಾಗಿತ್ತು. ಧಾರವಾಡದ ಅಪಾರ್ಟ್ಮೆಂಟ್‌ನಲ್ಲಿ ಈ ಭೀಕರ ಕೊಲೆ ಘಟನೆ ಇಡೀ ನಗರವನ್ನೇ ಬೆಚ್ಚಿಬೀಳಿಸಿದೆ. ವೈದ್ಯ ಕಿರಣ್ ಹೊನಣ್ಣವರ್ (45) ಅವರನ್ನು ಅವರ ಪತ್ನಿ ಪ್ರಿಯಾಂಕಾಳೇ ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಆರೋಪ ಕೇಳಿಬಂದಿದೆ.

ಒಂದು ಕೊಠಡಿಯಲ್ಲಿ ಪತಿಯ ಮೃತದೇಹ ರಕ್ತದ ಮಡುವಿನಲ್ಲಿ ಬಿದ್ದಿದ್ದರೆ, ಮತ್ತೊಂದು ಕೊಠಡಿಯಲ್ಲಿ ಎಂಟು ವರ್ಷದ ಮಗ ನೇಹಿತ್ ಮೇಲೂ ಚಾಕು ದಾಳಿ ನಡೆಸಲಾಗಿದೆ. ಘಟನೆಯ ಮಾಹಿತಿ ತಿಳಿದು ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ತೀವ್ರ ರಕ್ತಸ್ರಾವದಿಂದ ಮಗು ಉಸಿರಾಟಕ್ಕಾಗಿ ಹೋರಾಡುತ್ತಿರುವುದನ್ನು ಗಮನಿಸಿದ ಹುಬ್ಬಳ್ಳಿ–ಧಾರವಾಡ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಅವರು, ಮಗುವನ್ನು ತಾವೇ ಎತ್ತಿಕೊಂಡು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಮಗು ಚಿಕಿತ್ಸೆ ಪಡೆಯುತ್ತಿದ್ದು, ಜೀವ ಉಳಿಸಲು ವೈದ್ಯರು ಹರಸಾಹಸ ಪಡುತ್ತಿದ್ದಾರೆ.

ಘಟನೆ ನಡೆದ ಅಪಾರ್ಟ್ಮೆಂಟ್‌ನಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಕಿರಣ್ ಅವರ ಸಹೋದರಿಯರ ಕಣ್ಣೀರು ನೋಡುಗರ ಮನಕಲಕುವಂತಿತ್ತು. ಸ್ಥಳದಲ್ಲಿ ಪೊಲೀಸರು ಸಾಕ್ಷ್ಯ ಸಂಗ್ರಹ ನಡೆಸಿದ್ದು, ಆರೋಪಿ ಪ್ರಿಯಾಂಕಾಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.. ಕೊಲೆಗೆ ನಿಖರ ಕಾರಣವೇನು ಎಂಬುದು ತನಿಖೆಯಿಂದಷ್ಟೇ ತಿಳಿಯಬೇಕಿದೆ.

ಒಟ್ಟಿನಲ್ಲಿ ಒಂದೇ ಮನೆಯೊಳಗೆ ನಡೆದ ಈ ಭೀಕರ ಕೃತ್ಯ ಹಲವಾರು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಪತಿಯ ಹತ್ಯೆ ಮತ್ತು ಮಗನ ಮೇಲಿನ ದಾಳಿಯ ಹಿಂದಿನ ಕಾರಣವೇನು? ಪೂರ್ವಯೋಜಿತ ಸಂಚುವೇ? ಅಥವಾ ಕ್ಷಣಿಕ ಆಕ್ರೋಶವೇ? ಎಂಬ ಎಲ್ಲಾ ಆಯಾಮಗಳಲ್ಲಿ ಪೊಲೀಸರು ತನಿಖೆ ಮುಂದುವರಿಸಿದ್ದು, ಅಂತಿಮವಾಗಿ ಪೊಲೀಸರೇ ಈ ಕೊಲೆ ಪ್ರಕರಣ ಅಸಲಿ ಸತ್ಯವನ್ನು ಹೊರತರಬೇಕಾಗಿದೆ.

View this post on Instagram

A post shared by News Karnataka (@newskarnataka)