ಧಾರವಾಡ: ವ್ಯಕ್ತಿಯೊಬ್ಬರು ಕಣ್ಮರೆಯಾಗಿ ಮೂರು ವರ್ಷಗಳ ನಂತರ ಅವರ ಅಸ್ಥಿಪಂಜರ ಪತ್ತೆಯಾದ ಘಟನೆ ಇಲ್ಲಿಯ ಮಾಳಮಡ್ಡಿ ಬಡಾವಣೆಯ ಕೆನರಾ ಬ್ಯಾಂಕ್ ಬಳಿ ಘಟನೆ ನಡೆದಿದೆ.
ನಗರದಲ್ಲಿ ಅವರ ಸ್ವಂತ ಮನೆಯಲ್ಲೇ ಶವ ಮನೆಯಲ್ಲಿ ಮಲಗಿದ ಸ್ಥಿತಿಯಲ್ಲೇ ಕಂಡುಬಂದಿದೆ. ಆದರೆ ಮೂರು ವರ್ಷಗಳಿಂದ ಯಾರೂ ಇದನ್ನು ಗಮನಿಸಿಲ್ಲ.ಚಂದ್ರಶೇಖರ್ ಎಂಬ ಈ ವ್ಯಕ್ತಿ ಮೂರು ವರ್ಷಗಳಿಂದ ಎಲ್ಲೂ ಕಾಣಿಸಿರಲಿಲ್ಲ. ಕಳೆದ ತಿಂಗಳು ಈತ ಕಾಣುತ್ತಿಲ್ಲ ಎಂದು ಧಾರವಾಡ ವಿದ್ಯಾಗಿರಿ ಠಾಣೆಯಲ್ಲಿ ಒಬ್ಬರು ದೂರು ಕೊಟ್ಟಿದ್ದರು. ಚಂದ್ರಶೇಖರ್ ಅವರನ್ನು ಎಲ್ಲ ಕಡೆ ಹುಡುಕಾಡಿದ್ದ ಪೊಲೀಸರು, ನಿನ್ನೆ ಅವರ ಮನೆಗೆ ಹೋಗಿದ್ದರು. ಅಲ್ಲಿ ಹೋದಾಗ ಪೊಲೀಸರಿಗೆ ಅಚ್ಚರಿಯಾಗುವಂತೆ ಚಂದ್ರಶೇಖರ್ ಅಸ್ಥಿಪಂಜರ ಮನೆಯಲ್ಲೇ ಪತ್ತೆಯಾಗಿದೆ.
ಚಂದ್ರಶೇಖರ್ ತಮ್ಮ ಪತ್ನಿಯ ಸಾವಿನ ನಂತರ ಮನೆಯಲ್ಲಿ ಒಬ್ಬನೇ ಇರುತ್ತಿದ್ದರು. ಅದಾದ ಬಳಿಕ ಕೋವಿಡ್ ಬಂದಿತ್ತು. ಕೋವಿಡ್ ವೇಳೆಯೇ ಇವರು ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ. ಮೃತ ವ್ಯಕ್ತಿಯ ಸಂಬಂಧಿಕರು ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಇರುವ ಬಗ್ಗೆ ಮಾಹಿತಿ ಇದೆ. ಯಾರೂ ಇವರ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸಿರಲಿಲ್ಲ.
ಇವರು ಹಾಲು, ಪೇಪರ್ ಕೂಡ ಹಾಕಿಸಿಕೊಳ್ಳುತ್ತಿರಲಿಲ್ಲ. ಹೀಗಾಗಿ ವ್ಯಕ್ತಿ ಸತ್ತದ್ದು ಯಾರ ಗಮನಕ್ಕೂ ಬಂದಿಲ್ಲ. ಸುತ್ತಮುತ್ತ ಮನೆಗಳಿದ್ದರೂ ಯಾರಿಗೂ ಗೊತ್ತಾಗಿಲ್ಲ ಎಂಬುದು ವಿಚಿತ್ರ. ಸದ್ಯ ಅಸ್ಥಿಪಂಜರವನ್ನು ವಶಕ್ಕೆ ಪಡೆದ ಪೊಲೀಸರು, ಇದು ಅವರದೇನಾ ಎಂದು ತಿಳಿಯಲು ವಿಧಿವಿಜ್ಞಾನ ತಪಾಸಣೆಗೆ ಕಳಿಸಿದ್ದಾರೆ.

