ಧಾರವಾಡ : ಬುಲೆರೊ ವಾಹನವೊಂದು ಬೈಕ್‌ ಸವಾರನಿಗೆ ಗುದ್ದಿ ಪರಾರಿಯಾಗಿರುವ ಘಟನೆ ಧಾರವಾಡದ ಹಳೇ ಡಿವೈಎಸ್‌ಪಿ ವೃತ್ತದ ಬಳಿ ನಡೆದಿದ್ದು, ಈ ಭಯಾನಕ ದೃಶ್ಯ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಧಾರವಾಡ ಮದಿಹಾಳದ ಸಿದ್ದಾರೂಢ ಕಾಲೊನಿಯ ರೋಹಿತ್ ಜಗದೀಶ ಕುಂಬಾರ ಎಂಬ 22 ವರ್ಷದ ಯುವಕನೇ ಈ ಘಟನೆಯಲ್ಲಿ ಸಾವನ್ನಪ್ಪಿದವನು.

ರೋಹಿತ್ ಬೈಕ್‌ ತೆಗೆದುಕೊಂಡು ರಸ್ತೆ ದಾಟುವಾಗ ಅತೀ ವೇಗದಿಂದ ಬಂದ ಬುಲೆರೊ ವಾಹನ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಬೈಕ್ ಒಂದು ಕಡೆ ಸವಾರ ಒಂದು ಕಡೆ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ರೋಹಿತ್ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಅಸುನೀಗಿದ್ದಾನೆ.

ಬುಲೆರೊ ವಾಹನದ ಚಾಲಕ ಸೌಜನ್ಯಕ್ಕೂ ತನ್ನ ವಾಹನ ನಿಲ್ಲಿಸದೇ ಪರಾರಿಯಾಗಿದ್ದಾನೆ. ಈ ಘಟನೆ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಈ ಸಂಬಂಧ ದೂರು ದಾಖಲಿಸಿಕೊಂಡಿರುವ ಸಂಚಾರ ಠಾಣೆ ಪೊಲೀಸರು ತನಿಖೆ ನಡೆಸಿದ್ದಾರೆ.