ಚಿಕ್ಕಮಗಳೂರು: ವಿಜಯಪುರ ಶ್ರೀ ವೀರಾಂಜನೇಯಸ್ವಾಮಿ ದೇವಸ್ಥಾನದ ೩೪ ನೇ ವಾರ್ಷಿಕೋತ್ಸವ ಸಮಾರಂಭವು ನೂರಾರು ಭಕ್ತಾಧಿಗಳ ಸಮ್ಮುಖದಲ್ಲಿ ಪೂಜಾ ವಿಧಿವಿಧಾನ ಗಳು ಅತ್ಯಂತ ಶ್ರದ್ದಾಭಕ್ತಿಯಿಂದ ಸಂಪನ್ನಗೊಂಡು ಸಾರ್ವಜನಿಕ ಅನ್ನಸಂತರ್ಪಣೆ ನಡೆಸಲಾಯಿತು.
ಇಂದು ಮುಂಜಾನೆ ೬.೩೦ಕ್ಕೆ ಶ್ರೀ ವೀರಾಂಜನೇಯಸ್ವಾಮಿಗೆ ಏಕದಶಾವಾರ ರುದ್ರಾಭಿಷೇಕ, ಆಂಜನೇಯ ಮೂಲಮಂತ್ರ ಹೋಮ, ಕಲಾಹೋಮ, ಅಷ್ಟೋತ್ತರ ಶತಕಲಾಭಿಷೇಕ, ಮಹಾಮಂಗಳಾರತಿ ಹಾಗೂ ತೀರ್ಥ ಪ್ರಸಾದ ವಿನಿಯೋಗ ಮಾಡಲಾಯಿತು.
ಪೂಜಾವಿಧಿವಿಧಾನ ಕಾರ್ಯಕ್ರಮದಲ್ಲಿ ಜಿಲ್ಲೆಯ ಬಹುತೇಕ ಕಡೆಗಳಿಂದ ಭಕ್ತ ಸಮೂಹ ಪಾಲ್ಗೊಂಡು ವಿಶೇಷ ಪೂಜೆ, ಅರ್ಚನೆ ನಡೆಸಿದರು. ವೃದ್ದರು, ಮಹಿಳೆಯರು ಹಾಗೂ ಮಕ್ಕಳು ದೇವಾಲಯದ ಸುತ್ತಲು ಪ್ರದಕ್ಷಣೆ ಹಾಕುವ ಮೂಲಕ ಪರಾವಶರಾದರು.
ಕಳೆದ ಎರಡು ದಿನಗಳ ಕಾಲ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ದೇವಾಲಯ ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿತ್ತು. ಬುಧವಾರ ರಾತ್ರಿಯಿಂದಲೇ ವಿಶೇಷ ತಯಾರಿಯಲ್ಲಿ ಸ್ಥಳೀಯ ಮಹಿಳೆಯರು, ಯುವಕರು ಪಾಲ್ಗೊಂಡು ದೇವಾಲಯ ಕೃಪೆಗೆ ಪಾತ್ರರಾದರು.

