ಚಾಮರಾಜನಗರ: ಗುಂಡ್ಲುಪೇಟೆ ತಾಲೂಕಿನಿಂದ ಅಕ್ರಮವಾಗಿ ನೆರೆಯ ಕೇರಳ ರಾಜ್ಯಕ್ಕೆ ಜಲ್ಲಿ ಮತ್ತು ಎಂ. ಸ್ಯಾಂಡ್ ಸೇರಿದಂತೆ ಇತರೆ ಉತ್ವನ್ನಗಳನ್ನು ಸಾಗಣೆ ಮಾಡಲಾಗುತ್ತದೆ ಎಂದು ಆರೋಪಿಸಿ ಮದ್ದೂರು ಚೆಕ್ ಪೋಸ್ಟ್ ಬಳಿ ಟಿಪ್ಪರ್ ಲಾರಿಗಳನ್ನು ಸಾಮೂಹಿಕ ನಾಯಕತ್ವದ ರೈತ ಸಂಘಟನೆ ಪದಾಧಿಕಾರಿಗಳು ತಡೆದು ಪ್ರತಿಭಟನೆ ನಡೆಸಿದ್ದಾರೆ.

ತಾಲೂಕಿನ ಮದ್ದೂರು ಚೆಕ್ ಪೋಸ್ಟ್ ಮೂಲಕ ಕೇರಳ ರಾಜ್ಯಕ್ಕೆ ಪರ್ಮಿಟ್ ಇಲ್ಲದೆ ಕ್ರಷರ್ ಉತ್ಪನ್ನ ಹಾಗೂ ಕಲ್ಲುಗಳನ್ನು ತುಂಬಿಕೊಂಡು ತೆರಳುತ್ತಿದ್ದ ಟಿಪ್ಪರ್ ಲಾರಿಗಳನ್ನು ತಡೆದು ಪರಿಶೀಲನೆ ನಡೆಸಿದಾಗ ನಾಲ್ಕು ಟಿಪ್ಪರ್ ಗಳಲ್ಲಿ ದಾಖಲಾತಿಗಳನ್ನು ಪರಿಶೀಲಿಸಿದಾಗ ಎರಡು ದಿನಗಳ ಹಿಂದೆ ಪರ್ಮಿಟ್ ಮುಗಿದಿರುವುದು ಕಂಡು ಬಂತು ನಂತರ ಪೊಲೀಸ್ ಇಲಾಖೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಆರ್ ಟಿ ಓ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರ ಹಾಕಿದರು.

ರೈತ ಸಂಘಟನೆಯ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್ ಮಾತನಾಡಿ ತಾಲೂಕಿನಿಂದ ನೆರೆಯ ಕೇರಳ ರಾಜ್ಯಕ್ಕೆ ಹತ್ತಾರು ಟಿಪ್ಪರ್ ಲಾರಿಗಳಲ್ಲಿ ಕ್ರಷರ್ ಉತ್ಪನ್ನಗಳನ್ನು ಪರ್ಮಿಟ್ ಇಲ್ಲದೆ ಸಾಗಣೆ ಮಾಡಲಾಗುತ್ತಿದ್ದು ಇದರಿಂದ ಸರ್ಕಾರಕ್ಕೆ ಕೋಟ್ಯಂತರ ರಾಜಧನ ವಂಚನೆಯಾಗುತ್ತಿದೆ ಎಂದರು.

ತಾಲೂಕು ಆಡಳಿತ, ಜಿಲ್ಲಾ ಆಡಳಿತ ಪೊಲೀಸ್ ಇಲಾಖೆ ಗಣಿ ಇಲಾಖೆ ಇದರ ಅರಿವಿದ್ದರೂ ಸಹ ಇದರ ವಿರುದ್ಧ ಕ್ರಮಕ್ಕೆ ಮುಂದಾಗಿಲ್ಲ ಎಂದು ದೂರಿದರು. ಆದ್ದರಿಂದ ಜಿಲ್ಲಾಡಳಿತ ಮತ್ತು ಸ್ಥಳೀಯ ಶಾಸಕರು ಈ ಕೂಡಲೇ ಅಕ್ರಮಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕ್ರಮ ವಹಿಸಬೇಕು ಇಲ್ಲದಿದ್ದರೆ ಹೋರಾಟ ಕೈಗೊಳ್ಳುತ್ತೇವೆ ಎಂದು ಎಚ್ಚರಿಸಿದರು.

ತಹಶೀಲ್ದಾರ್ ಟಿ ರಮೇಶ್ ಬಾಬು ರವರಿಗೆ ರೈತ ಸಂಘಟನೆಯ ಪದಾಧಿಕಾರಿಗಳು ಮನವಿ ಸಲ್ಲಿಸಿ ಒಂದು ವಾರದೊಳಗೆ ಕ್ರಮ ವಹಿಸುವಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ರೈತ ಸಂಘಟನೆ ಪದಾಧಿಕಾರಿಗಳಾದ ಪಾಪಣ್ಣ. ಲೋಕೇಶ್, ಗಣೇಶ್, ಮಹೇಶ್, ಮೂರ್ತಿ, ಕೃಷ್ಣ, ಶಿವಣ್ಣ ಇತರರು ಹಾಜರಿದ್ದರು.