ಗುಂಡ್ಲುಪೇಟೆ: ಪೊಲೀಸ್ ಇನ್ಸ್ ಪೆಕ್ಟರ್, ಶಿಕ್ಷಕ ಹಾಗೂ ಸಾರ್ವಜನಿಕರೊಬ್ಬರಿಗೆ ಬೀದಿನಾಯಿ ಕಡಿದು ಗಾಯಗೊಳಿಸಿರುವ ಘಟನೆ ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ ಸೋಮವಾರ ಬೆಳಗ್ಗೆ ನಡೆದಿದೆ.

ಠಾಣೆಯ ಸಿಬ್ಬಂದಿಯೇ ಆಹಾರ ನೀಡುತ್ತ ಸಾಕಿದ್ದ ಬೀದಿ ನಾಯಿ ಸೋಮವಾರ ಬೆಳಗ್ಗೆ ಮೊಬೈಲ್ ಕಳೆದುಕೊಂಡಿದ್ದ ಶಿಕ್ಷಕರೊಬ್ಬರು ದೂರು ಕೊಡಲು ಠಾಣೆಗೆ ಬಂದಿದ್ದು, ಪೊಲೀಸ್ ಪೇದೆಯೊಬ್ಬರೊಂದಿಗೆ ಮಾತನಾಡುತ್ತಾ ನಿಂತಿದ್ದಾಗ ಹಿಂಬದಿಯಿಂದ ಬಂದು ಬಲಗಾಲಿಗೆ ಕಚ್ಚಿತ್ತು.

ಇವರು ದೂರು ನೀಡುವುದನ್ನು ಬದಿಗೊತ್ತಿ ಆಸ್ಪತ್ರೆಗೆ ತೆರಳಿ ಚುಚ್ಚುಮದ್ದು ಪಡೆದಿದ್ದಾರೆ. ಇದಾದ ನಂತರ ಸ್ನೇಹಿತರೊಂದಿಗೆ ಬಂದಿದ್ದ ಸಾರ್ವಜನಿಕರೊಬ್ಬರನ್ನು ನಾಯಿ ಕಚ್ಚಿತ್ತು. ಇದರಿಂದ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿತ್ತು.

ಪೊಲೀಸರು ನಾಯಿ ಹಿಡಿಸುವ ಬಗ್ಗೆ ಚರ್ಚೆಯಲ್ಲಿದ್ದರು. ಆದರೆ ಅಷ್ಟರಲ್ಲೇ ಠಾಣೆಗೆ ಬಂದ ಪೊಲೀಸ್ ಇನ್ಸ್‍ಪೆಕ್ಟರ್ ಪರಶಿವಮೂರ್ತಿರನ್ನೂ ಬೀದಿ ನಾಯಿ ಕಚ್ಚಿತ್ತು. ಇವರು ಕೆಲಸಕ್ಕೆ ವಿರಾಮ ನೀಡಿ ಚಿಕಿತ್ಸೆಗೆ ತೆರಳಿದರು.

ಠಾಣೆ ಬಳಿಯೇ ಇದ್ದ ಬೀದಿ ನಾಯಿ ಈ ಹಿಂದೆ ಹುಚ್ಚುನಾಯಿ ಕಡಿತಕೊಳಕ್ಕಾಗಿದ್ದ ಹಿನ್ನೆಲೆ ಚುಚ್ಚುಮದ್ದು ಕೊಡಿಸಲಾಗಿತ್ತು. ಇದರಿಂದ ಯಾವುದೇ ತೊಂದರೆ ಮಾಡದೇ ನಾಯಿ ಠಾಣೆ ಬಳಿ ಇರುತ್ತಿತ್ತು. ಆದರೆ ಸೋಮವಾರ ಇದ್ದಕ್ಕಿದ್ದಂತೆ ಇನ್ಸ್ಪೆಕ್ಟರ್ ಸೇರಿ ಮೂವರನ್ನು ಕಡಿದು ಗಾಯಗೊಳಿಸಿತು. ನಂತರದಲ್ಲಿ ನಾಯಿಯನ್ನು ಹಿಡಿಸುವ ಪ್ರಯತ್ನ ನಡೆಸುವಷ್ಟರಲ್ಲಿ ನಾಯಿ ತಾನಾಗಾಗಿಯೇ ಮೃತಪಟ್ಟಿತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.