ಚಾಮರಾಜನಗರ: ನಗರದ ಶ್ರೀ ಚಾಮರಾಜೇಶ್ವರ ದೇವಸ್ಥಾನದ ಆವರಣದಲ್ಲಿರುವ ಚಾಮುಂಡೇಶ್ವರಿ ತಾಯಿಗೆ ತಮಿಳುನಾಡಿನಲ್ಲಿರುವ ಭಕ್ತರಾದ ಶ್ರೀಕಂಠಸ್ವಾಮಿ ತಮ್ಮ ತಾಯಿ ತಂದೆಯ ಸ್ಮರಣಾರ್ಥ ಚಿನ್ನ ಲೇಪಿತ ಕವಚವನ್ನು ಕೊಡುಗೆಯಾಗಿ ಅರ್ಪಿಸಿದ್ದಾರೆ.
ಚಾಮರಾಜನಗರ ಶ್ರೀ ಚಾಮರಾಜೇಶ್ವರ ದೇವಾಲಯದ ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ಆವರಣಲ್ಲಿ ಕವಚಗಳನ್ನು ಇಟ್ಟು ಹೋಮ ಹವನ ಫಲಗಳನ್ನಿಟ್ಟು ಪೂಜೆ ಸಲ್ಲಿಸಿ, ನಂತರ ಚಾಮುಂಡೇಶ್ವರಿ ತಾಯಿಗೆ ಕವಚಗಳನ್ನು ತೊಡಿಸಿ, ವಿಶೇಷ ಪೂಜೆ ಸಲ್ಲಿಸಿ ಮಹಾ ಮಂಗಳಾರತಿ ಮಾಡಿ ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಲಾಯಿತು. ಇದಕ್ಕೂ ಮುನ್ನ ಚಿನ್ನ ಲೇಪಿತ ಕವಚಗಳನ್ನು ದೇವಸ್ಥಾನದ ಸುತ್ತ ಪ್ರದಕ್ಷಿಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಕಂಠಸ್ವಾಮಿ ನನ್ನ ತಂದೆ ಹಿಂದೆ ಚಾಮರಾಜೇಶ್ವರ ದೇವಸ್ಥಾನದಲ್ಲಿ ಪ್ರಧಾನ ಅರ್ಚಕರಾಗಿ ಸೇವೆ ಸಲ್ಲಿಸಿದ್ದರು. ನಂತರ ನಾವು ತಮಿಳುನಾಡಿಗೆ ಹೋಗಿ ನೆಲೆಸಿದವು, ಭಗವಂತ ನಮಗೆ ಸಕಲವನ್ನು ಕೊಟ್ಟು ಕಾಪಾಡುತ್ತಿದ್ದು, ನಮ್ಮ ತಂದೆ ತಾಯಿಯ ಸ್ಮರಣೆಗಾಗಿ ಈಗಾಗಲೇ ಶ್ರೀ ಚಾಮರಾಜೇಶ್ವರ ಉತ್ಸವ ಮೂರ್ತಿಗೆ ಚಿನ್ನಾಭರಣ ಮಾಡಿಸಿಕೊಟ್ಟಿದ್ದು ಈಗ ಚಾಮುಂಡೇಶ್ವರಿ ತಾಯಿಗೆ ಚಿನ್ನಲೇಪಿತ ಕವಚಗಳನ್ನು ಎರಡೂವರೆ ಲಕ್ಷ ವೆಚ್ಚದಲ್ಲಿ ಚಿನ್ನ ಲೇಪಿತ ಕವಚವನ್ನು ಕೊಡುಗೆಯಾಗಿ ನೀಡುತ್ತಿದ್ದೇವೆ ಎಲ್ಲವೂ ಭಗವಂತನ ಇಚ್ಛೆ ಎಂದರು.
ಅರ್ಚಕ ಡಾ. ನಾಗರಾಜ ದೀಕ್ಷಿತ್ ಮಾತನಾಡಿ, ಇದು ಮಾಘ ಮಾಸ ಈ ಸಂದರ್ಭದಲ್ಲಿ ದೇವಿಯು ತನ್ನ ವಿರಾಟ ರೂಪದಲ್ಲಿ ಭಕ್ತರಿಗೆ ದರ್ಶನ ನೀಡಿ ಆಶೀರ್ವದಿಸುತ್ತಾಳೆ, ಇದು ಸುದಿನ ಶ್ರೀ ಚಾಮರಾಜೇಶ್ವರ ದೇವಸ್ಥನದ ಪ್ರಧಾನ ಅರ್ಚಕರಾಗಿ ಸೇವೆ ಸಲ್ಲಿಸಿದ್ದ ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಹುಲ್ಲಹಳ್ಳಿಯ ಎಚ್.ವಿ.ವಿಶ್ವೇಶ್ವರ ಪಂಡಿತ ಅವರ ಪುತ್ರ ಶ್ರೀಕಂಠಸ್ವಾಮಿ ದೇವರಿಗೆ ವಜ್ರಾಂಗಿ ಆಭರಣ ನೀಡಿದ್ದಾರೆ, ತಾಯಿ ಎಲ್ಲರಿಗೂ ಸನ್ಮಂಗಳವನ್ನುಂಟು ಮಾಡಲಿ ಎಂದರು.
ಈ ಸಂದರ್ಭದಲ್ಲಿ ಶ್ರೀಕಂಠಸ್ವಾಮಿ ಹಾಗೂ ಅವರ ಕುಟುಂಬ, ತಹಸೀಲ್ದಾರ್ ಗಿರಿಜಾ, ಹಿರಿಯರಾದ ಗಣೇಶ್ ದೀಕ್ಷಿತ್, ಆಗಮಿಕರಾದ ದರ್ಶನ್, ಅನಿಲ್, ಪ್ರದೀಪ್ ಕುಮಾರ್ ದೀಕ್ಷಿತ್, ರಮೇಶ್ ಇದ್ದರು.

