ಗುಂಡ್ಲುಪೇಟೆ : ಪ್ರತಿಷ್ಠಿತ ಹುಲಿ ಸಂರಕ್ಷಿತಾ ಪ್ರದೇಶದಲ್ಲಿ ಅನಧಿಕೃತವಾಗಿ ಹೆಚ್ಚುವರಿ ಕೊಠಡಿಗಳ ನಿರ್ಮಾಣಕ್ಕೆ ಮುಂದಾಗಿರುವ ಖಾಸಗಿ ರೆಸಾರ್ಟ್ ಕಂಟ್ರಿ ಕ್ಲಬ್ನಿಂದ ನಿಯಮ ಉಲ್ಲಂಘನೆ ಮಾಡಲಾಗಿದ್ದು ರಾಜಾರೋಷವಾಗಿ ಕಾಮಗಾರಿ ನಡೆಸಲಾಗುತ್ತಿದೆ. ಇತ್ತ ರೆಸಾರ್ಟಿನ ಪ್ಲಾಸ್ಟಿಕ್ ತ್ಯಾಜ್ಯದಿಂದ ವನ್ಯಜೀವಿಗಳ ಜೀವಕ್ಕೆ ಕುತ್ತು ಬಂದಿದೆ ಎಂದು ಪರಿಸರವಾದಿ ಜೋಸೆಫ್ ಹೂವರ್ ಗಂಭೀರ ಆರೋಪ ಮಾಡಿದ್ದಾರೆ.

ಸ್ಥಳೀಯ ರೈತರು ವಾಸ ಮಾಡಲು ತಮ್ಮ ಸ್ವಂತ ಜಮೀನಿನಲ್ಲಿ ಮನೆ ನಿರ್ಮಾಣ ಮಾಡಲು ಅರಣ್ಯ ಇಲಾಖೆಯ ಸರ್ವಾನುಮತಿಗೆ ವರ್ಷಗಟ್ಟಲೆ ಕಾಯಬೇಕು ಇದರ ನಡುವೆ ಮನೆ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದ್ದರೆ ನೆಲಸಮ ಮಾಡಲು ಶಿಫಾರಸ್ಸು ಮಾಡುವ ಅಧಿಕಾರಿಗಳು ಪ್ರಭಾವಿಗಳ ರೆಸಾರ್ಟ್ ಅದ್ವಾನವನ್ನ ಪ್ರಶ್ನಿಸದೆ ಮೌನಕ್ಕೆ ಶರಣಾಗಿದ್ದಾರೆ ಎಂದು ದೂರಿದ್ದಾರೆ.

ಕಾಡಿನ ಉಳಿವಿಗೆ ವನ್ಯಜೀವಿಗಳ ರಕ್ಷಣೆಗೆ ರೈತರು ಕಳೆದ ಆರೇಳು ತಿಂಗಳುಗಳಿಂದ ಸತತವಾಗಿ ಹೋರಾಟ ನಡೆಸುತ್ತಿದ್ದಾರೆ ಇತ್ತ ಪರಿಸರ ಸಂರಕ್ಷಣೆ ಪಾಠ ಮಾಡುವ ಕೇಂದ್ರ ಸ್ಥಳಗಳಲ್ಲಿಯೇ ಅನಧಿಕೃತ ಕಟ್ಟಡ ನಿರ್ಮಾಣ ಎಗ್ಗಿಲ್ಲದೆ ಸಾಗುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. 30 ಕುಟೀರಗಳ ನಿರ್ಮಾಣಕ್ಕೆ ಮಾತ್ರ ಅವಕಾಶ ನೀಡಿತ್ತು ಆದರೆ ಪರಿಸರ ಸೂಕ್ಷ್ಮ ವಲಯದ ನಿಯಮ ಮತ್ತು ಕಟ್ಟಲೆಗಳನ್ನ ಗಾಳಿಗೆ ತೂರಿದ ಮಾಲೀಕರು ಹೆಚ್ಚುವರಿ ಕುಟೀರಗಳ ನಿರ್ಮಾಣಕ್ಕೆ ಮುಂದಾಗಿದ್ದಾರೆ ಆದರೆ ಅರಣ್ಯ ಇಲಾಖೆ ಅಧಿಕಾರಿಗಳು ಕಂಡೂ ಕಾಣದಂತಿರುವುದಕ್ಕೆ ಕಾರಣವೇನು ಎಂದು ಪ್ರಶ್ನಿಸಿದ್ದಾರೆ.

ಎಲ್ಲೆಂದರಲ್ಲಿ ಪ್ಲಾಸ್ಟಿಕ್ : ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ ಪಾಲನೆ ಮಾಡದೆ ಮಾಲಿನ್ಯ ನಿಯಂತ್ರಣ ಮಂಡಳಿ ನಿಯಮವನ್ನೂ ಸಹ ಉಲ್ಲಂಘಿಸಿರುವ ರೆಸಾರ್ಟ್ ಕಸವನ್ನ ಎಲ್ಲೆಂದರಲ್ಲಿ ಬೀಸಾಡುತ್ತಿರುವುದು ಕಂಡುಬಂದಿದೆ, ನಿಯಮಾವಳಿಯಂತೆ ಹೊಂಡವನ್ನ ತೆಗೆದು ವನ್ಯಪ್ರಾಣಿಗಳಿಗೆ ಸಿಗದಂತೆ ಸುರಕ್ಷಿತವಾಗಿ ಮುಚ್ಚಬೇಕು ಆದರೆ ಅರಣ್ಯ ಸಂರಕ್ಷಣೆ ಬದ್ಧತೆ ಮರೆತ ಮಾಲೀಕರ ನಡೆಯಿಂದ ವನ್ಯಜೀವಿಗಳಿಗೆ ಹಾನಿಕಾರಕವಾಗಲಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಪ್ಲಾಸ್ಟಿಕ್ ಕವರ್ಗಳನ್ನ ಬೀಸಾಡುವುದರಿಂದ ಜಿಂಕೆ, ಕಾಡೆಮ್ಮೆ ಇನ್ನಿತರ ವನ್ಯಜೀವಿಗಳು ಸೇವಿಸುವುದರಿಂದ ಪ್ರಾಣಕ್ಕೆ ಸಂಚಕಾರವಾಗಲಿದೆ ಆದುದರಿಂದ ರೆಸಾರ್ಟ್ ಮಾಲೀಕರ ವಿರುದ್ಧ ಸೂಕ್ತ ಕ್ರಮಕ್ಕೆ ಅರಣ್ಯ ಇಲಾಖೆ ಮುಂದಾಗಬೇಕು ಎಂದು ಆಗ್ರಹಿಸಿದ್ದಾರೆ.