ಚಾಮರಾಜನಗರ: ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದಲ್ಲಿ ಅಕ್ರಮವಾಗಿ ಶ್ರೀಗಂಧದ ಮರದ ತುಂಡುಗಳನ್ನು ಸಾಗಾಣಿಕೆಯಲ್ಲಿ ನಿರತರಾಗಿದ್ದ ಬಾಲಾಪರಾಧಿ ಸೇರಿ ನಾಲ್ಕು ಮಂದಿಯನ್ನು ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ದಳದವರು ಶ್ರೀಗಂಧ ತುಂಡುಗಳ ಸಮೇತ ಸತ್ತೇಗಾಲ ಹ್ಯಾಂಡ್ ಪೋಸ್ಟ್ ಬಳಿ ಬಂಧಿಸಿದ್ದಾರೆ.
ಮಂಡ್ಯ ಜಿಲ್ಲೆಯ ಮದ್ದೂರಿನ ಚನ್ನೇಗೌಡ ಬಡಾವಣೆಯ ಗಂಗಾಧರ್ ಅಲಿಯಾಸ್ ರಮೇಶ್ (23), ಕೊಳ್ಳಗೇರಿ ಗ್ರಾಮದ ಮಹೇಂದ್ರ (18), ಶಿವಶಂಕರ್ (20) ಹಾಗೂ ಬಾಲ ಅಪರಾಧಿ ಅಣಗಳ್ಳಿ ದೊಡ್ಡಿ ವಿಕಾಸ್ (17) ಬಂಧಿತರು.
ಇವರೆಲ್ಲರೂ ಸೇರಿ ಬೊಲೆರೋ ವಾಹನದಲ್ಲಿ ಸುಮಾರು 123ಕೆ.ಜಿ ತೂಕದ 10 ಶ್ರೀಗಂಧದ ತುಂಡುಗಳನ್ನು ತುಂಬಿಸಿ ಸಾಗಾಟ ಮಾಡುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಬಂದ ಹಿನ್ನಲೆಯಲ್ಲಿ ವಾಹನವನ್ನು ತಡೆದು ತಪಾಸಣೆ ನಡೆಸಿದ ವೇಳೆ ಮಾಲು ಇರುವುದು ಪತ್ತೆಯಾಗಿದೆ. ವಾಹನ ಸಹಿತ ಮಾಲನ್ನು ವಶಪಡಿಸಿಕೊಂಡಿರುವ ಪೊಲೀಸರು ಆರೋಪಿಗಳನ್ನು ಹೆಚ್ಚಿನ ವಿಚಾರಣೆಗಾಗಿ ಅರಣ್ಯ ಇಲಾಖಾಧಿಕಾರಿಗಳಿಗೆ ಹಸ್ತಾಂತರಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
Ad