ಬಿಜಾಪುರ : ನಾರಾಯಣಪುರದ ಸರ್ಕೇಗೌಡ ಮೋರಿ ಬಳಿ ಬಾಂಬ್ ಸ್ಫೋಟಕ್ಕೆ ಸಂಚು ರೂಪಿಸುತ್ತಿದ್ದ ಮೂವರು ನಕ್ಸಲರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕುಡಮಿ ಸೋಮ್ಲು, ಲಿಂಗು ಸೆಮ್ಲಾ ಅಲಿಯಾಸ್ ಲಿಂಗ ಮತ್ತು ಸೋಮ್ಲು ಕಡ್ತಿ ಬಂಧಿತ ನಕ್ಸಲರು. ಡಿಸ್ಟ್ರಿಕ್ಟ್ ರಿಸರ್ವ್ ಗಾರ್ಡ್ , ಕೋಬ್ರಾ ಬೆಟಾಲಿಯನ್ ಮತ್ತು ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್ ತಂಡವು ಅರಣ್ಯದಲ್ಲಿ ಅನುಮಾನಾಸ್ಪದ ವ್ಯಕ್ತಿಗಳ ಓಡಾಟ ಬಗ್ಗೆ ನಿಗಾ ಇಟ್ಟಿದ್ದರು.
ಸರ್ಕೇಗೌಡ ಮತ್ತು ಪೆಗಡಪಲ್ಲಿಯಲ್ಲಿ ಶೋಧ ಕಾರ್ಯಾಚರಣೆಯಲ್ಲಿ ತೊಡಗಿದಾಗ ಮೂವರು ನಕ್ಸಲರ ಪತ್ತೆಯಾಗಿದ್ದಾರೆ. ಅನುಮಾನದ ಮೇರೆಗೆ ಮೂವರನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಬಾಂಬ್ ಸ್ಫೋಟಕ್ಕೆ ಸಂಚು ರೂಪಿಸುತ್ತಿರುವುದಾಗಿ ಸತ್ಯ ಬಾಯ್ಬಿಟ್ಟಿರುವುದಾಗಿ ಎಂದು ಪೊಲೀಸರು ತಿಳಿಸಿದ್ದಾರೆ.
ಸೋಮ್ಲು ಮಿಲಿಟಿಯ ಸದಸ್ಯರಾಗಿದ್ದರೆ, ಲಿಂಗ ಮಿಲಿಟರಿ ವಿಭಾಗದ ಕಮಾಂಡರ್ ಆಗಿದ್ದ. ಕಡ್ತಿ ಕ್ರಾಂತಿಕಾರಿ ಪಕ್ಷದ ಸಮಿತಿಯ ಅಧ್ಯಕ್ಷನಾಗಿದ್ದ. ಕಾರ್ಯಾಚರಣೆಯಲ್ಲಿ, ಅವರಿಂದ ಸ್ಫೋಟಿಸುವ ಕೋಡೆಕ್ಸ್ ವೈರ್, ಗನ್ ಪೌಡರ್, ಡಿಟೋನೇಟರ್ ಮತ್ತು ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇವರ ಬಂಧನಕ್ಕೂ ಮುನ್ನ ದೋಸೆಲ್ ಸಲಾಂ ಮತ್ತು ಆರತಿ ಸಲಾಂ ಎಂಬ ನಕ್ಸಲ್ ದಂಪತಿ ಶಸ್ತ್ರಾಸ್ತ್ರಗಳನ್ನು ತ್ಯಜಿಸುವ ಮೂಲಕ ಪೊಲೀಸ್ ವರಿಷ್ಠಾಧಿಕಾರಿ ಪ್ರಭಾತ್ ಕುಮಾರ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಬಿನ್ಸನ್ ಗುಡಿಯಾ ಮತ್ತು ಉಪ ಪೊಲೀಸ್ ವರಿಷ್ಠಾಧಿಕಾರಿ ಡಾ.ಪ್ರಶಾಂತ್ ದೇವಾಂಗನ್ ಅವರ ಮುಂದೆ ಗುರುವಾರ ಶರಣಾಗಿದ್ದರು.

