ಹುಬ್ಬಳ್ಳಿ: ಹಕ್ಕಿಜ್ವರ ಪ್ರಕರಣ ಪತ್ತೆಯಾದ ಹಿನ್ನೆಲೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಾಂಸ ಹಾಗೂ ಮೊಟ್ಟೆ ಮಾರಾಟದಲ್ಲಿ ಭಾರೀ ಕುಸಿತ ಕಂಡಿದೆ.

ಶಿವಮೊಗ್ಗದಲ್ಲಿ ರವಿವಾರ 1 ಲಕ್ಷ ಕೆಜಿ ಚಿಕನ್‌ ಮಾರಾಟವಾಗಿದೆ. ರಾಯಚೂರು ಜಿಲ್ಲೆಗೆ ಆಂಧ್ರ, ತೆಲಂಗಾಣದಿಂದ ಕೋಳಿಗಳ ಆಮದು ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದರಿಂದ ವ್ಯಾಪಾರದಲ್ಲಿ ಭಾರೀ ಇಳಿಕೆ ಕಂಡಿದೆ.

ಸ್ಥಳೀಯ ಕೋಳಿ ಫಾರಂಗಳಿಗೂ ಕಳೆದ ಎರಡುಮೂರು ದಿನಗಳಿಂದ ಬೇಡಿಕೆಯೇ ಇಲ್ಲವಾಗಿದೆ. ಚಿಕನ್‌ ಬದಲು ಮಟನ್‌ ವ್ಯಾಪಾರ ಹೆಚ್ಚಾಗಿದೆ. ರೆಸ್ಟೋರೆಂಟ್‌, ಡಾಬಾಗಳಲ್ಲೂ ಚಿಕನ್‌ಗೆ ಸಂಬಂಧಿಸಿದ ಆಹಾರ ಪದಾರ್ಥಗಳ ತಯಾರಿಸುವುದನ್ನೇ ನಿಲ್ಲಿಸಲಾಗಿದೆ.

ಹಾವೇರಿ ಜಿಲ್ಲೆಯಲ್ಲಿ ಫಾರ್ಮ್ ಕೋಳಿ ಸಾಕಾಣಿಕೆದಾರರು ಕೋಳಿ ಸಾಕಾಣಿಕೆಗೆ ಹಿಂದೇಟು ಹಾಕುತ್ತಿದ್ದರಿಂದ ಮಾರುಕಟ್ಟೆಗೆ ಚಿಕನ್‌ ಪೂರೈಕೆಯ ಪ್ರಮಾಣ ಕುಂಠಿತಗೊಂಡಿದೆ.