ಬೀದರ್ : ಬಿಜೆಪಿ ಮುಖಂಡ, ಹಿರಿಯ ಯೋಗ ಶಿಕ್ಷಕ ಧೋಂಡಿರಾಮ ಚಾಂದಿವಾಲೆ ಅವರ ಮೃತದೇಹವು ಶನಿವಾರ ಬೆಳಿಗ್ಗೆ ನೆರೆಯ ಮಹಾರಾಷ್ಟ್ರದ ಉಮರ್ಗಾ ರಾಷ್ಟ್ರೀಯ ಹೆದ್ದಾರಿ ಪಕ್ಕ ಪತ್ತೆಯಾಗಿದೆ.

ಮೃತರ‌ ಜೇಬಿನಲ್ಲಿ ದೊರೆತ ಬಸ್ ಟಿಕೆಟ್ ಮತ್ತು ಟ್ಯಾಟೋ ಆಧಾರದ ಮೇಲೆ‌ ಉಮರ್ಗಾ ಪೊಲೀಸರು ಜಿಲ್ಲೆಗೆ ಸಂಪರ್ಕಿಸಿದ್ದು, ಚಾಂದಿವಾಲೆ ಅವರ ಮೃತದೇಹ‌ ಇರುವುದು ಧೃಡವಾಗಿದೆ.

ಮೃತದೇಹದ ಫೋಟೋಗಳು ಗಮನಿಸಿದರೆ ಅನುಮಾನಕ್ಕೆ ಎಡೆಮಾಡಿಕೊಟ್ಟಿದ್ದು, ಇದು ಕೊಲೆ ಅಥವಾ ರಸ್ತೆ ಅಪಘಾತ ಎನ್ನುವುದು ಪೊಲೀಸರ ತನಿಖೆಯಿಂದಲೇ ಗೊತ್ತಾಗಲಿದೆ. ಉಮರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೂಲತಃ ಭಾಲ್ಕಿ ತಾಲೂಕಿನ ಲಖನಗಾಂವ್ ನಿವಾಸಿಯಾದ ಚಾಂದಿವಾಲೆ ಹಲವು ವರ್ಷಗಳಿಂದ ನಗರದಲ್ಲಿ ವಾಸವಾಗಿದ್ದರು. ಯೋಗದಲ್ಲಿ ಅತಿವ ಆಸಕ್ತಿ ಹೊಂದಿದ ಚಾಂದಿವಾಲೆ 2008ರಿಂದ ನಗರದ ಬರೀದ್ ಶಾಹಿ ಉದ್ಯಾನದಲ್ಲಿ ಉಚಿತ ಯೋಗ ಶಿಬಿರ ನಡೆಸುತ್ತಿದ್ದರು. ಯೋಗ ಗುರು ಬಾಬಾ ರಾಮದೇವ ಅವರ ಆಪ್ತರಾಗಿದ್ದರು, ಮರಾಠ ಸಮಾಜ ಮುಖಂಡರಾದ ಚಾಂದಿವಾಲೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಭಾಲ್ಕಿ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು.