ಬೆಂಗಳೂರು: ತಡರಾತ್ರಿ ಸುರಿದ ಭಾರೀ ಮಳೆ ಆರ್ಭಟಕ್ಕೆ ಓರ್ವ ಮಹಿಳೆ ಬಲಿಯಾಗಿದ್ದಾರೆ. ಶಶಿಕಲಾ (35) ಮಳೆಗೆ ಬಲಿಯಾದ ಮಹಿಳೆ.
ಇಂದು ಬೆಳಗ್ಗೆ ಮಹದೇವಪುರದ ಚನ್ನಸಂದ್ರದಲ್ಲಿ ಐ ಝಡ್ ಕಂಪನಿಯಲ್ಲಿ ಹೌಸ್ ಕೀಪಿಂಗ್ ಕೆಲಸಕ್ಕೆ ಹೋದಾಗ ಈ ಘಟನೆ ನಡೆದಿದೆ. ಶಶಿಕಲಾ ಕೆಲಸದ ಮಾಡುತ್ತಿದ್ದ ಸ್ಥಳದಲ್ಲಿ ಕಾಂಪೌಂಡ್ ಗೋಡೆ ಕುಸಿದು ಬಿದ್ದಿದೆ. ಪರಿಣಾಮ ಶಶಿಕಲಾ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಇಡೀ ರಾತ್ರಿ ಮಳೆಗೆ ಗೋಡೆ ನೆನೆದಿದ್ದರಿಂದ ಏಕಾಏಕಿ ಶಶಿಕಲಾ ಮೇಲೆ ಗೋಡೆ ಬಿದ್ದಿದೆ. ಮೃತ ಶಶಿಕಲಾ ಅವರಿಗೆ ಇಬ್ಬರು ಸಣ್ಣ ಮಕ್ಕಳಿದ್ದಾರೆ. ಶಶಿಕಲಾ ಗಂಡ ಕೂಡ ಕೂಲಿ ಕೆಲಸ ಮಾಡುತ್ತಿದ್ದಾರೆ.
ಇವರು ಶಹಾಪುರ ಮೂಲದವರಾಗಿದ್ದಾರೆ. ಇನ್ನೂ ಈ ವಿಚಾರ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಮಹದೇವಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

