ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅಧಿಕೃತ ನಿವಾಸ ಕಾವೇರಿಯಲ್ಲಿ ಮೀಟಿಂಗ್ ಹಾಲ್ ಉದ್ಘಾಟನೆ ನೆಪದಲ್ಲಿ ಸಿದ್ದರಾಮಯ್ಯ ಅವರು ಸಚಿವರನ್ನು ಉಪಹಾರಕೂಟಕ್ಕೆ ಆಹ್ವಾನಿಸಿ ಮಹತ್ವದ ಸಭೆ ಮಾಡಿದ್ದಾರೆ. ಕಳೆದ ಕೆಲ ದಿನಗಳಿಂದ ಕಾಂಗ್ರೆಸ್ ಸರ್ಕಾರದಲ್ಲಿ ನಡೆಯುತ್ತಿದ್ದ ಬಣ ರಾಜಕೀಯ ಸಿಎಂ ಬದಲಾಗ್ತಾರೆ ಎಂಬ ಹೇಳಿಕೆ ಪ್ರತಿಹೇಳಿಕೆಗೆ ಉತ್ತರವೆಂಬಂತೆ ಸಿದ್ದರಾಮಯ್ಯ ಸಭೆ ಆಯೋಜಿಸಿದ್ದರು.
ಈ ಸಭೆಯಲ್ಲಿ ಸಿಎಂ ಬದಲಾವಣೆ ಹೇಳಿಕೆ ವಿಚಾರದ ಬಗ್ಗೆ ಗಂಭೀರವಾಗಿ ಚರ್ಚೆಯಾಗಿದೆ. ನಾನೇ ಐದು ವರ್ಷ ಸಿಎಂ ಆಗಿ ಮುಂದುವರೆಯುತ್ತೇನೆ ಎಂದಿರುವ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ್ದಾರೆ. ನಾನೇ ಸಿಎಂ ಆಗಿ ಮುಂದುವರಿಯುತ್ತೇನೆ ಎಂಬ ಹೇಳಿಕೆ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಸಿಎಂ ಗಾದಿಯನ್ನ ಬಿಗಿಯಾಗಿ ಹಿಡಿದಿಟ್ಟುಕೊಂಡಿದ್ದೇನೆ ಎಂಬಂತೆ ನಾನು ಹೇಳಿಲ್ಲ. ಹಾಲಿ ಸಿಎಂ ಇದ್ದೇನೆ, ನಾನು ಮುಂದುವರಿಯುತ್ತೇನೆ ಎಂದಿದ್ದೇನಷ್ಟೇ. ಮುಂದೆ ಹೈಕಮಾಂಡ್ ಬೇರೆ ವಿಚಾರ ಪ್ರಸ್ತಾಪಿಸಿದರೆ ಅದಕ್ಕೆ ಬದ್ಧ ಎಂದು ಪಕ್ಕದಲ್ಲೇ ಕೂತಿದ್ದ ಡಿ.ಕೆ.ಶಿವಕುಮಾರ್ ಉದ್ದೇಶಿಸಿ ಸಿದ್ದರಾಮಯ್ಯ ಹೇಳಿದ್ದಾರೆ.
ಅಲ್ಲದೇ ಇದೇ ವೇಳೆ ಏನಪ್ಪ ಶಿವಕುಮಾರ್ ನೀನು ಸಿಎಂ ಆಗ್ತೀಯಾ ಎಂದು ತಮಾಷೆ ಮಾಡಿದ್ದಾರೆ. ಏಯ್.. ಅದೆಲ್ಲ ಏಕೆ.. ಮುಂದೆ ನೋಡೋಣ ಸರ್.. ಇಲ್ಲಿ ಈಗ ಏಕೆ ಎಂದು ಡಿಕೆ ಶಿವಕುಮಾರ್ ಸಹ ಸಿದ್ದರಾಮಯ್ಯ ಮಾತಿಗೆ ತಮಾಷೆ ಮಾತುಗಳನ್ನಾಡಿದ್ದಾರೆ.
ನನ್ನ ಮತ್ತು ಡಿ.ಕೆ.ಶಿವಕುಮಾರ್ ನಡುವೆ ಯಾವುದೇ ಅಸಮಾಧಾನ ಇಲ್ಲ. ನಾನೇನೋ ಹೇಳಿಕೆ ನೀಡಿ ಬಿಟ್ಟೆ. ನೀವು ಸಹ ಸಾಲು ಸಾಲಾಗಿ ಹೇಳಿಕೆ ನೀಡುವುದು ಸರಿ ಅಲ್ಲ. ನೀವು ಈ ರೀತಿ ಹೇಳಿಕೆ ನೀಡಿದರೆ ಪಕ್ಷ ಹಾಗೂ ಸರ್ಕಾರದ ಮೇಲೆ ಪ್ರಭಾವ ಬೀರುತ್ತೆ. ನಾವು ನಮ್ಮ ರಾಜಕೀಯವನ್ನ ನೇರವಾಗಿ ಬಿಜೆಪಿ ವಿರುದ್ದ ಮಾಡಬೇಕು. ಆದರೆ ನಾವು ನಾವೇ ರಾಜಕೀಯ ಮಾಡಿಕೊಂಡರೆ ಅದು ಖಂಡಿತ ಸರಿ ಅಲ್ಲ ಎಂದು ಹೇಳಿದ್ದಾರೆ.