ಬೆಂಗಳೂರು: ಕ್ಯಾಬ್ ಚಾಲಕ ಸಿಎನ್‌ಜಿ ತುಂಬಿಸಿಕೊಳ್ಳಲು ಕೋರಮಂಗಲಕ್ಕೆ ಬಂದಿದ್ದ ವೇಳೆ ಸಿಎನ್‌ಜಿ ಬಂಕ್‌ನಲ್ಲಿ ಅನಿರೀಕ್ಷಿತ ಅವಘಡ ಸಂಭವಿಸಿದೆ. ಗ್ಯಾಸ್ ತುಂಬುವ ವೇಳೆ ಪೈಪ್ ಸಿಡಿದು ಚಾಲಕನ ಕಣ್ಣಿಗೆ ತೀವ್ರ ಗಾಯವಾಗಿದೆ.

ಕಳೆದ ಭಾನುವಾರ ಕೋರಮಂಗಲದಲ್ಲಿ ಈ ಘಟನೆ ನಡೆದಿದೆ. ಕಾರಿಗೆ ಸಿಎನ್‌ಜಿ ತುಂಬುವ ವೇಳೆ ಲಾಕ್ ಮಾಡಿದ್ದ ಗನ್ ಏಕಾಏಕಿ ಪ್ರೆಸರ್‌ನಿಂದ ಓಪನ್ ಆಗಿದೆ. ಈ ವೇಳೆ ಸಿಎನ್‌ಜಿ ಗ್ಯಾಸ್ ಪೈಪ್ ಜೋರಾಗಿ ಸಿಡಿದು ಚಾಲಕನ ಕಣ್ಣಿಗೆ ಬಡಿದಿದೆ. ಪರಿಣಾಮ ಚಾಲಕನ ಕಣ್ಣಿಗೆ ತೀವ್ರ ಹಾನಿಯಾಗಿದೆ.

ಗಾಯಗೊಂಡ ಚಾಲಕನನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಅವಘಡ ನಡೆದ ತಕ್ಷಣ ಅಲ್ಲಿದ್ದ ಆಟೋ ಚಾಲಕರು ಕೂಡಲೇ ನೆರವಿಗೆ ಧಾವಿಸಿದ್ದಾರೆ. ಗಾಯಾಳುವನ್ನು ಆಸ್ಪತ್ರೆಗೆ ಕಳುಹಿಸಲು ಸಹಾಯ ಮಾಡಿದ್ದಾರೆ. ಈ ಘಟನೆ ಬಂಕ್‌ನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬಳಿಕ ಅದರ ದೃಶ್ಯವನ್ನು ಬಂಕ್ ಸಿಬ್ಬಂದಿ ಹಂಚಿಕೊಂಡಿದ್ದಾರೆ.