ತುಮಕೂರು: ಸರ್ಕಾರಿ ಬಸ್ಸಿನಲ್ಲಿ ಮುಂದೆ ಹೋಗುವಂತೆ ಯುವಕನಿಗೆ ಮನವಿ ಮಾಡಿದ್ದಕ್ಕೆ ವ್ಯಕ್ತಿಯೋರ್ವನನ್ನು ಚಾಕುವಿನಿಂದ ಇರಿದ ಆಘಾತಕಾರಿ ಘಟನೆ ನಡೆದಿದೆ.
ಹೊಳವನಹಳ್ಳಿ ನಿವಾಸಿ ಇರ್ಷಾದ್ ಕೊರಟಗೆರೆ ರವೀಂದ್ರ ಭಾರತಿ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ ಹಾಗೂ ಅದೇ ಗ್ರಾಮದ ನಿವಾಸಿ ಜಬೀವುಲ್ಲಾ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ನಿಲ್ಲಲು ಸಹ ಸ್ಥಳವಿಲ್ಲದ ಕಾರಣ ಇರ್ಷಾದ್ ಅವರನ್ನು ಮುಂದೆ ಚಲಿಸಲು ಕೇಳಿದ ನಂತರ ಈ ಘಟನೆ ನಡೆದಿದೆ.
ಘಟನಾ ಸ್ಥಳಕ್ಕೆ ಕೊರಟಗೆರೆ ಪಿಎಸ್ ಐ ಚೇತನ್ ಕುಮಾರ್ ಭೇಟಿ ನೀಡಿದ್ದಾರೆ. ಇರ್ಷಾದ್ ಎಂಬ ವಿದ್ಯಾರ್ಥಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ನಂತರ ರಾಜಿ ಸಂಧಾನದ ಮೂಲಕ ಪ್ರಕರಣ ಇತ್ಯರ್ಥ ಪಡಿಸಿದ್ದಾರೆ ಎಂದು ತಿಳಿದು ಬಂದಿದೆ.
ಈ ಹಿಂದೆಯೂ ಬಸ್ ಗಳಿಗಾಗಿ ವಿದ್ಯಾರ್ಥಿಗಳು ಪರದಾಡುತ್ತಿರುವ ಬಗ್ಗೆ ಪತ್ರಿಕೆಗಳಲ್ಲಿ ವರದಿಯಾಗಿತ್ತು. ಸಾರಿಗೆ ಇಲಾಖೆ ಎಚ್ಚೆತ್ತುಕೊಂಡಿದ್ದರೆ ಈ ಘಟನೆ ನಡೆಯುತ್ತಿರಲಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.