ತುಮಕೂರು: ನನ್ನ ಮೇಲೆ ವಿಶ್ವಾಸ ಇಟ್ಟು ನಾಲ್ಕನೆ ಬಾರಿಗೆ ಶಾಸಕನನ್ನಾಗಿ ಆಯ್ಕೆ ಮಾಡಿದ ಕ್ಷೇತ್ರದ ಜನರ ಪ್ರೀತಿಗೆ ಸದಾ ಋಣಿಯಾಗಿರುತ್ತೇನೆ ಎಂದು ಶಾಸಕ ಸಿ.ಬಿ.ಸುರೇಶ್ಬಾಬು ಹೇಳಿದರು.
ಹುಳಿಯಾರು ಪಟ್ಟಣದಲ್ಲಿ ಭಾನುವಾರ ಕಾರ್ಯಕರ್ತರು ಹಮ್ಮಿಕೊಂಡಿದ್ದ ವಿಜಯೋತ್ಸವದಲ್ಲಿ ಅವರು ಮಾತನಾಡಿದರು.
ನನ್ನ ಮೇಲೆ ಪ್ರೀತಿ, ವಿಶ್ವಾಸ ಅಭಿಮಾನವಿಟ್ಟು ಮತ ನೀಡಿ ರಾಜಕೀಯ ಜೀವನದ ಪಯಣಕ್ಕೆ ಅನುವು ಮಾಡಿ ಕೊಟ್ಟಿರುವಿರಿ. ನಿಮ್ಮ ಮತಕ್ಕೆ ಬೆಲೆ ಬರುವ ರೀತಿಯಲ್ಲಿ ನಡೆದುಕೊಳ್ಳುತ್ತೇನೆ. ಕ್ಷೇತ್ರದ ಜನರ ನಂಬಿಕೆಗೆ ಚ್ಯುತಿ ಬರದಂತೆ ಮುಂದಿನ ಐದು ವರ್ಷಗಳ ಕಾಲ ಕೆಲಸ ಮಾಡುತ್ತೇನೆ. ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ದುಡಿಯುತ್ತೇನೆ ಎಂದು ಭರವಸೆ ನೀಡಿದರು.
ಮತ ಹಾಕಿದವರು, ಮತ ಹಾಕದವರು ಎಂಬ ಬೇಧಭಾವ ಮಾಡುವುದಿಲ್ಲ. ಜಾತಿ, ಧರ್ಮದ ಆಧಾರದ ಮೇಲೂ ತಾರತಮ್ಯ ಮಾಡುವುದಿಲ್ಲ. ಎಲ್ಲ ಜನರ ಕೆಲಸ ಮಾಡಿಕೊಡುವೆ. ನನಗೆ ಮತ ಹಾಕಿರುವುದು, ಹಾಕದೇ ಇರುವುದು ಮುಖ್ಯ ಅಲ್ಲ. ಯಾವುದೇ ಜಾತಿ, ಧರ್ಮ ಮುಖ್ಯ ಅಲ್ಲ. ಇಲ್ಲಿ ಎಲ್ಲರೂ ಒಂದೇ ಎಂಬ ಭಾವನೆ ನನ್ನದು ಅದರಂತೆ ನಡೆದುಕೊಳ್ಳುತ್ತೇನೆ ಎಂದರು.
ಪಕ್ಷದ ಕಾರ್ಯಕರ್ತರು, ಮುಖಂಡರು ಗೆಲುವಿಗಾಗಿ ಬಹಳ ಶ್ರಮಪಟ್ಟಿದ್ದಾರೆ. ಯಾರೂ ನಕರಾತ್ಮಕವಾದ ಪ್ರಚಾರ ಮಾಡದೇ, ಎಲ್ಲರೂ ಸಕರಾತ್ಮಕವಾಗಿಯೆ ಪ್ರಚಾರ ಮಾಡಿ ಗೆಲುವಿಗೆ ಸಹಕರಿಸಿದ್ದಾರೆ. ಅಲ್ಲದೆ ಮತಯಾಚನೆಗೆ ತೆರಳಿದಾಗ ಮತದಾರರು ಚುನಾವಣಾ ಖರ್ಚಿಗೆ ಹಣ ಕೊಟ್ಟು ಶುಭ ಹಾರೈಸಿ ಕಳುಹಿಸುತ್ತಿದ್ದನ್ನು ನಾನು ಜೀವನ ಪರ್ಯಂತ ಮರೆಯುವುದಿಲ್ಲ. ಎಲ್ಲರ ಶ್ರಮದ ಫಲ ಈಗ ಸಿಕ್ಕಿದೆ. ಮತದಾರರಿಗೆ, ಕಾರ್ಯಕರ್ತರಿಗೆ, ಹಿರಿಯರಿಗೆ ಧನ್ಯವಾದ ಅರ್ಪಿಸುವುದಾಗಿ ತಿಳಿಸಿದರು.
ಸತತ ೧೦ ವರ್ಷ ಅಧಿಕಾರದಲ್ಲಿದ್ದು, ೫ ವರ್ಷ ಅಧಿಕಾರವಿರದಿದ್ದರೂ ಸದಾ ಜನರೊಂದಿಗಿದ್ದು, ಜನರ ಸಮಸ್ಯೆಗಳಿಗೆ ಸ್ಪಂದಿಸಿದ್ದೇನೆ. ಕೋವಿಡ್ ಸಂದರ್ಭದಲ್ಲಂತೂ ಮನೆಯ ಮಗನಾಗಿ ಜನತೆಗೆ ಸ್ಪಂಧಿಸಿದ್ದೇನೆ. ಹಾಗಾಗಿಯೇ ಜನರು ಕೈ ಹಿಡಿದು, ಅಭೂತಪೂರ್ವ, ದಾಖಲೆಯ ಗೆಲುವು ನೀಡಿದ್ದಾರೆ. ಕ್ಷೇತ್ರದಲ್ಲಿ ಮತದಾರರಿಗೂ, ಶಾಸಕರಿಗೂ ನಡುವೆ ಅಂತರ ಇತ್ತು. ನಾನು ಈ ಅಂತರವನ್ನು ಇಲ್ಲದಂತೆ ನಡೆದುಕೊಳ್ಳುತ್ತೇನೆ ಎಂದರು.
ಅಭಿವೃದ್ಧಿಗೆ ಸಹಕಾರ ನೀಡಲು ಮನವಿ: ಕ್ಷೇತ್ರದ ಅಭಿವೃದ್ಧಿಗೆ ಪಕ್ಷ ಬೇಧ ಮರೆತು ಕಾರ್ಯ ನಿರ್ವಹಿಸುತ್ತೇನೆ. ಎಲ್ಲರೂ ಪಕ್ಷ ಬಿಟ್ಟು ಅಭಿವೃದ್ಧಿಗೆ ಸಹಕಾರ ನೀಡಿ ಮಾರ್ಗದರ್ಶನ ಮಾಡಬೇಕಾಗಿ ಕೋರುತ್ತೇನೆ. ವಿರೋಧ ಪಕ್ಷದವರು ಅಭಿವೃದ್ಧಿಗೆ ಸಹಕಾರ ನೀಡದಿದ್ದರೂ ಈ ಹಿಂದೆ ಅಭಿವೃದ್ಧಿಗೆ ಅಡ್ಡಗಾಲು ಹಾಕಿದಂತೆ ಈ ಬಾರಿ ಹಾಕಬೇಡಿ ಎಂದು ಕೇಳಿಕೊಂಡರು.
ಸುರೇಶ್ಬಾಬುಗೆ ಅದ್ಧೂರಿ ಸ್ವಾಗತ: ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಆಯ್ಕೆಯಾದ ನಂತರ ಸಿ.ಬಿ.ಸುರೇಶ್ಬಾಬು ಅವರಿಗೆ ಹುಳಿಯಾರು ಪಟ್ಟಣದಲ್ಲಿ ಅದ್ಧೂರಿ ಸ್ವಾಗತ ನೀಡಲಾಯಿತು. ರೋಡ್ ಶೋ ವೇಳೆ ರಸ್ತೆಯಲ್ಲಿ ಪಕ್ಷದ ಕಾರ್ಯಕರ್ತರು, ಮುಖಂಡರು, ಅಭಿಮಾನಿಗಳು ಹೂವಿನ ಹಾರ ಹಾಕುವ ಮೂಲಕ ಅಭಿನಂದಿಸಿದರು. ರೋಡ್ ಶೋ ವೇಳೆ ರಸ್ತೆಯುದ್ದಕೂ ನೆರೆದಿದ್ದ ಜನಸ್ತೋಮಕ್ಕೆ ಶಾಸಕರು ಕೈ ಮುಗಿದು ಧನ್ಯವಾದ ಅರ್ಪಿಸಿದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಸಿಂಗದಹಳ್ಳಿ ರಾಜ್ಕುಮಾರ್, ತಾಲೂಕು ಜೆಡಿಎಸ್ ಅಧ್ಯಕ್ಷ ರಾಮಚಂದ್ರಯ್ಯ, ಜಿಪಂ ಮಾಜಿ ಸದಸ್ಯ ಕಲ್ಲೇಶ್, ತಾಪಂ ಮಾಜಿ ಅಧ್ಯಕ್ಷ ಶಶಿಧರ್, ಮುಖಂಡರಾದ ಏಜಾಸ್, ಬೆಳವಾಡಿಕುಮಾರ್, ಏಜೆಂಟ್ ಕುಮಾರ್, ಗಣೇಶ್, ರಾಘವೇಂದ್ರ, ರವಿ, ಸೇರಿದಂತೆ ಅನೇಕರು ಇದ್ದರು.