ತುಮಕೂರು: ವಿದ್ಯುತ್ ತಂತಿ ತಗುಲಿ ತಂದೆ ಹಾಗೂ ಮಗಳು ಸಾವನ್ನಪ್ಪಿರುವ ದಾರುಣ ಘಟನೆ ತುಮಕೂರು ಜಿಲ್ಲೆಯಲ್ಲಿ ನಡೆದಿದೆ.
ಪಾವಗಡ ತಾಲ್ಲೂಕಿನ ಬಸವನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮೃತರನ್ನು ರಾಮಕೃಷ್ಣ ರೆಡ್ಡಿ (65) ಮತ್ತು ನಿರ್ಮಲಾ ಎಂದು ಗುರುತಿಸಲಾಗಿದೆ.
ಬಸವನಹಳ್ಳಿ ಗ್ರಾಮದ ಯಲೋಟಿ ಬಳಿಯ ತನ್ನ ಜಮೀನಿಗೆ ನೀರು ಹಾಯಿಸಲು ರಾಮಕೃಷ್ಣ ಹೋಗಿದ್ದಾಗ ಬೋರ್ ವೆಲ್ ಬಳಿ ವಿದ್ಯುತ್ ತಗುಲಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ತಂದೆಯನ್ನು ಹುಡುಕಿಕೊಂಡು ಬಂದ ಮಗಳು ನಿರ್ಮಲಾ ಕೂಡ ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಪಾವಗಡ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.