ತುಮಕೂರು: ಭೋವಿ ಸಮುದಾಯದ ಹಿರಿಯ ಮುಖಂಡರು, ಬಿಜೆಪಿಯ ರಾಜ್ಯದ ಪ್ರಭಾವಿ ನಾಯಕರಾಗಿರುವ ಮಹದೇವಪುರದ ಶಾಸಕರಾದ ಅರವಿಂದ ಲಿಂಬಾವಳಿ ಅವರಿಗೆ ಟಿಕೆಟ್ ಪ್ರಕಟಸದೆ ಇರುವ ಬಿಜೆಪಿ ಪಕ್ಷದ ಧೋರಣೆಯನ್ನು ಖಂಡಿಸಿ, ಇಂದು ತುಮಕೂರು ಜಿಲ್ಲಾ ಭೋವಿ ಸಮಾಜದವತಿಯಿಂದ ಬಿಜೆಪಿ ಎಸ್ಸಿ ಮೋರ್ಚಾ ಮಾಜಿ ಅಧ್ಯಕ್ಷ ಓಂಕಾರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ನಗರದ ಟೌನ್ಹಾಲ್ ವೃತ್ತದಲ್ಲಿ ಸಮಾವೇಶಗೊಂಡ ಭೋವಿ ಸಮುದಾಯದ ಮುಖಂಡರು,ಬಿಜೆಪಿ ಪಕ್ಷ ಬಿಜೆಪಿ ದಕ್ಷಿಣ ಭಾರತದಲ್ಲಿ ತಳವೂರಲು ಕಾರಣರಾದ ಭೋವಿ ಸಮಾಜವನ್ನು ಕಡೆಗಣಿಸಿರುವುದು ಸರಿಯಲ್ಲ. ಜನಸಂಘ, ಆರ್.ಎಸ್, ಎಸ್ನ ಕಟ್ಟಾಳು ಆಗಿರುವ ಅರವಿಂದ ಲಿಂಬಾವಳಿ ಅವರಿಗೆ ಟಿಕೆಟ್ ಘೋಷಿಸದಿರುವುದು ಸರಿಯಲ್ಲ. ಹಾಗೆಯೇ ಗೂಳಿಹಟ್ಟಿ ಶೇಖರ್ ಅವರಿಗೆ ಟಿಕೆಟ್ ನೀಡದೆ ಕಡೆಗಣಿಸಿರುವು ಖಂಡನಾರ್ಹ. ಕೂಡಲೇ ಬಿಜೆಪಿ ಹೈಕಮಾಂಡ್ ತಪ್ಪನ್ನು ತಿದ್ದುಕೊಳ್ಳದಿದ್ದರೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಬಿಜೆಪಿ ಎಸ್.ಸಿ ಮೋರ್ಚಾ ನಿಕಟಪೂರ್ವ ಜಿಲ್ಲಾಧ್ಯಕ್ಷ ಹಾಗೂ ಜಿಲ್ಲಾ ಭೋವಿ ಸಂಘದ ಅಧ್ಯಕ್ಷರಾದ ಓಂಕಾರ್,ಸಮುದಾಯದ ನಾಯಕರನ್ನು ವ್ಯವಸ್ಥಿತವಾಗಿ ಮಟ್ಟಹಾಕುವ ಕೆಲಸಕ್ಕೆ ಬಿಜೆಪಿಯ ನಾಯಕರು ಕೈಹಾಕಿದ್ದಾರೆ. ಹಾಲಿ ಹೊಸದುರ್ಗದ ಶಾಸಕರಾಗಿರುವ ಗೂಳಿಹಟ್ಟಿ ಶೇಖರ್ವ ಅವರಿಗೆ ಟಿಕೆಟ್ ತಪ್ಪಿಸಿ ಸಮಾಜಕ್ಕೆ ದ್ರೋಹ ಮಾಡಿದ್ದಾರೆ. ಎಬಿವಿಪಿ ಸಂಘಟನೆಯ ರಾಜ್ಯ ರಾಷ್ಟ್ರೀಯ ಕಾರ್ಯದರ್ಶಿಗಳಾಗಿ ಹತ್ತಾರು ವರ್ಷ ಪೂರ್ಣಾವಧಿ ಕಾರ್ಯಕರ್ತರಾಗಿ ಸೇವೆ ಸಲ್ಲಿಸಿರುವ ಮಹದೇವಪುರ ಶಾಸಕ ಅರವಿಂದ ಲಿಂಬಾವಳಿ ಅವರಿಗೆ ಟಿಕೆಟ್ ನೀಡದೆ ವಿಳಂಬ ಮಾಡುತ್ತಿರುವುದು ರಾಜ್ಯದ ಭೋವಿ ಸಮುದಾಯದ ಆಕ್ರೋಶಕ್ಕೆ ಕಾರಣವಾಗಿದೆ ಎಂದರು.
ಕಳೆದ ಲೋಕಸಭಾ ಚುನಾವಣೆಯಲ್ಲಿ ತೆಲಂಗಾಣ ರಾಜ್ಯದ ಪ್ರಭಾರಿಗಳಾಗಿ ಅನೇಕ ಸ್ಥಾನಗಳಲ್ಲಿ ಬಿಜೆಪಿ ಗೆಲುವು ಸಾಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು, ಪಶ್ಚಿಮ ಬಂಗಾಳದ ಚುನಾವಣೆಯಲ್ಲೂ ಪಕ್ಷದ ಪ್ರಭಾರಿಗಳಾಗಿದ್ದರು, ೨೦೧೯ರ ತುಮಕೂರು ಲೋಕಸಭಾ ಚುನಾವಣೆಯಲ್ಲಿ ಸಮುದಾಯದ ಸಭೆಗಳನ್ನು ನೆಡೆಸಿ ಗೆಲುವಿಗೆ ಶ್ರಮಿಸಿದ್ದ ಲಿಂಬಾವಳಿ ಅವರನ್ನು ಕೆಲವೇ ತಿಂಗಳು ಸಚಿವರನ್ನಾಗಿಸಿ, ನಂತರ ಸರಕಾರದ ಮಂತ್ರಿ ಮಂಡಲದಿಂದ ದೂರವಿಟ್ಟು ಅನ್ಯಾಯ ಮಾಡಿದ್ದರು. ಭೋವಿ ಸಮುದಾಯದ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾಗಿ ಅನೇಕ ವರ್ಷಗಳಿಂದ ದೇಶಾಧ್ಯಂತ ಅನೇಕ ರಾಜ್ಯಗಳಲ್ಲಿ ಪ್ರವಾಸ ಮಾಡಿ ಭೋವಿ ಸಮುದಾಯದ ಸಂಘಟನೆ ಮಾಡುತ್ತಿರುವ ಲಿಂಬಾವಳಿರವನ್ನು ಕಡೆಗಣಿಸಿದರೆ ಪಕ್ಷದಲ್ಲಿರುವ ಭೋವಿ ಸಮಾಜದ ಮುಖಂಡರುಗಳು ಸಾಮೂಹಿಕ ರಾಜೀನಾಮೆ ನೀಡಲಾಗುವುದು ಎಂದು ಓಂಕಾರ್ ಎಚ್ಚರಿಸಿದರು.
ಅತಂತ್ರ ಫಲಿತಾಂಶದಿಂದ ೨೦೦೮ರಲ್ಲಿ ಮೊದಲ ಬಿಜೆಪಿ ಸರಕಾರ ರಚಿಸುವಾಗ ೧೧೦ ಸೀಟುಗಳನ್ನು ಗಳಿಸಿದ್ದ ಬಿಜೆಪಿಗೆ ೩ ಜನ ಭೋವಿ ಸಮಾಜದ ಪಕ್ಷೇತರ ಶಾಸಕರುಗಳಾದ ಶಿವರಾಜ್ತಂಗಡಗಿ, ವೆಂಕಟರಮಣಪ್ಪ, ಗೂಳಿಹಟ್ಟಿ ಶೇಖರ್ ನೀಡಿದ್ದರಿಂದ ಬಹುಮತಕ್ಕೆ ಬೇಕಾದ ೧೧೩ ತಲುಪಿ ಅಂದು ದಕ್ಷಿಣ ಭಾರತದ ಮೊದಲ ಬಿಜೆಪಿ ಸರಕಾರ ರಚನೆಯಾಗಿತ್ತು. ಆದರೆ ಬಿಜೆಪಿ ಕೃತಜ್ಞತೆ ಇಲ್ಲದೆ ಸಮಾಜಕ್ಕೆ ಅನ್ಯಾಯ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಿವೃತ್ತ ಸಿಪಿಐ ಮುನಿರಾಜು ಮಾತನಾಡಿ, ದಕ್ಷಿಣ ಭಾರತದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಕಾರಣರಾದ ಭೋವಿ ಸಮುದಾಯವನ್ನು ಬಿಜೆಪಿ ಕಡೆಗಣಿಸುತ್ತಿರುವುದು ಸರಿಯಲ್ಲ. ನಮ್ಮ ನಾಯಕರಾದ ಅರವಿಂದ ಲಿಂಬಾವಳಿ ಅವರ ಮೇಲೆ ಯಾವುದೇ ಗುರುತರ ಆರೋಪಗಳಿಲ್ಲ.ಯಾವ ಪ್ರಕರಣಗಳ ತನಿಖೆಯೂ ನಡೆಯುತ್ತಿಲ್ಲ. ಇಂತಹ ವೇಳೆಯಲ್ಲಿ ಅವರಿಗೆ ಟಿಕೇಟ್ ನೀಡಲು ಸತಾಯಿಸುತ್ತಿರುವುದು ಸಮಾಜ ಬಾಂಧವರಿಗೆ ನೋವುಂಟು ಮಾಡಿದೆ ಎಂದರು.
ಪ್ರತಿಭಟನೆಗೂ ಮುನ್ನ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿಯನ್ನು ಜಿಲ್ಲಾ ಭೋವಿ ಸಂಘದ ವತಿಯಿಂದ ಆಚರಿಸಲಾಯಿತು. ಜಿಲ್ಲಾ ಭೋವಿ ಸಂಘದ ಪ್ರ.ಕಾರ್ಯದರ್ಶಿ ಮಂಜುನಾಥ್, ಉಪಾಧ್ಯಕ್ಷರಾದ ಗೋವಿಂದರಾಜು, ಹುಲಿಗಪ್ಪ, ತುರುವೇಕೆರೆ ಮಹಾಲಿಂಗಪ್ಪ, ರಮೇಶ್, ಸಿರಾ ಗೋವಿಂದರಾಜು, ವೆಂಕಟೇಶ್,ಕಾಶಿನಾಥ್, ಭೂತೇಶ್ ಮತ್ತಿತರರು ಭಾಗವಹಿಸಿದ್ದರು.