ನಾಗಮಂಗಲ: ಸಂವಿಧಾನದ ಆಶಯದಂತೆ ಜೀತಪದ್ಧತಿ ನಿರ್ಮೂಲನೆಯಾಗಬೇಕು. ಸಾರ್ವಜನಿಕರು ಇಂತಹ ಅನಿಷ್ಟ ಪದ್ಧತಿ ನಿರ್ಮೂಲನೆಗೆ ಒಗ್ಗಟ್ಟಾಗಿ ಪಣತೊಟ್ಟಾಗ ಜೀತ ಪದ್ಧತಿಯನ್ನು ಹೋಗಲಾಡಿಸಲು ಸಾಧ್ಯ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ದೀಪಕ್ ಪಾಟೀಲ್ ಹೇಳಿದರು.
ನಾಗಮಂಗಲದ ಅಂಬೇಡ್ಕರ್ ಭವನದಲ್ಲಿ ಆಯೋಜನೆ ಮಾಡಿದ್ದ ತಾಲೂಕು ಕಾನೂನು ಸೇವಾ ಸಮಿತಿ, ತಾಲೂಕು ಆಡಳಿತ ವಕೀಲರ ಸಂಘ, ಅಭಿ ಯೋಜನೆ ಇಲಾಖೆ ಇವರುಗಳ ಸಂಯುಕ್ತ ಆಶಯದಲ್ಲಿ ಏರ್ಪಡಿಸಿದ್ದ ಜೀತ ಪದ್ಧತಿ ನಿರ್ಮೂಲನೆ ದಿನಾಚರಣೆ ಕಾರ್ಯಕ್ರಮದ ಉದ್ಘಾಟಿಸಿ ಮಾತನಾಡಿ ಜೀತದಾಳುಗಳನ್ನು ಜೀತ ಪದ್ಧತಿಯಿಂದ ಮುಕ್ತಗೊಳಿಸುವ ಮತ್ತು ಅವರಿಗೆ ಪುನರ್ವಸತಿ ಕಲ್ಪಿಸುವ ನಿಟ್ಟಿನಲ್ಲಿ ಅಧಿಕಾರಗಳ ಪ್ರಾಮಾಣಿಕ ಪ್ರಯತ್ನ ಅಗತ್ಯವಿದೆ ಎಂದರು.
ಜೀತ ಪದ್ಧತಿಯಡಿ ಸಿಲುಕುವ ಜೀತದಾಳುಗಳು ಸ್ವಾತಂತ್ರ್ಯ ಕಳೆದುಕೊಳ್ಳುತ್ತಾರೆ. ಭೂಮಾಲೀಕರು ಸೇರಿದಂತೆ ಬೇರೆ ಬೇರೆಯವರು ಜೀತದಾಳುಗಳಿಗೆ ಇಲ್ಲಸಲ್ಲದ ನೆಪವೊಡ್ಡಿ ಕಿರುಕುಳ ನೀಡುತ್ತಾರೆ. ಬದುಕಿದ್ದರೂ ಬದುಕಲಾರದಂತಹ ಸ್ಥಿತಿ ನಿರ್ಮಿಸುತ್ತಾರೆ. ಜೀತ ಪದ್ಧತಿಯನ್ನು ತೊಲಗಿಸುವುದಕ್ಕೆಶಿಕ್ಷಣ ಮುಖ್ಯವಾಗಿದೆ. ಶಿಕ್ಷಣ ಎಲ್ಲರಿಗೂ ಎಲ್ಲೆಡೆ ಉಚಿತವಾಗಿ ದೊರೆಯುತ್ತಿದೆ. ಶಿಕ್ಷಣ ಪಡೆದು ನಾಡಿನ ಸುಶಿಕ್ಷಿತ ಪ್ರಜೆಗಳಾಗಿ ದೇಶವನ್ನು ಕಟ್ಟಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಪ್ರತಿಯೊಬ್ಬ ಪ್ರಜ್ಞಾವಂತ ವ್ಯಕ್ತಿಯು ಕೂಡ ಜೀತ ಪದ್ಧತಿ ನಿರ್ಮೂಲನೆಗೆ ಶ್ರಮಿಸಬೇಕು ಎಂದು ಹೇಳಿದರು.
ಜೀತ ಪದ್ಧತಿ ನಿರ್ಮೂಲನೆಗಾಗಿ ಜನಜಾಗೃತಿ ಮೂಡಿಸಬೇಕು. ಡಿ.ದೇವರಾಜ ಅರಸು ಅವರ ನೇತೃತ್ವದಲ್ಲಿ 1976ರ ಜೀತ ಪದ್ಧತಿ ನಿರ್ಮೂಲನೆ ಕಾಯ್ದೆ ಅನುಷ್ಠಾನಗೊಳಿಸಿ 75 ವರ್ಷಗಳಾಗಿದ್ದರೂ ಕೆಲವು ಕಡೆ ಜೀತ ಪದ್ಧತಿ ಜೀವಂತವಾಗಿರುವುದು ವಿಷಾದದ ಸಂಗತಿಯಾಗಿದೆ ಎಂದರು.
ತಾಲೂಕು ವಕೀಲರ ಸಂಘದ ಅಧ್ಯಕ್ಷರಾದ ರಮೇಶ್ ಗೌಡ ಮಾತನಾಡಿ ಜೀತ ಪದ್ಧತಿ ಕೆಲವೆಡೆ ಸಣ್ಣ ಪ್ರಮಾಣದಲ್ಲಿ ಬೆಳಕಿಗೆ ಬಂದಿದೆ. ಇದರ ಬಗ್ಗೆ ಜನಸಾಮಾನ್ಯರು ಎಚ್ಚೆತ್ತುಕೊಂಡು ಜೀತ ಪದ್ಧತಿಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಪಣತೊಡಬೇಕಿದೆ ಎಂದು ಹೇಳಿದರು.
ಇದೇ ಸಮಾರಂಭದಲ್ಲಿ ತಾಲೂಕು ಕಾರ್ಯ ನಿರ್ವಹಣಾಧಿಕಾರಿಗಳಾದ ಚಂದ್ರ ಮೌಳಿ, ತಾಲೂಕು ಸಹಾಯಕ ನಿರ್ದೇಶಕರಾದ ರಾಜೇಶ್, ಸಮಾಜ ಕಲ್ಯಾಣ ಇಲಾಖೆ.ಸರ್ಕಾರಿ ಅಭಿಯೋಜಕರಾದ ಶ್ರೀದೇವಿ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.