ತುಮಕೂರು: ರಾಜ್ಯ ಸರಕಾರ ಪಡಿತರ ಚೀಟಿದಾರರಿಗೆ ವಿತರಿಸಲು ಪಡಿತರ ಕೇಂದ್ರಗಳಿಗೆ ವಿತರಿಸಲು ದಾಸ್ತಾನು ಮಾಡಿರುವ ರಾಗಿಯು ಕಲ್ಲು, ಮಣ್ಣುಗಳಿಂದ ಕೂಡಿದ್ದು, ಉಪಯೋಗಿಸಲು ಯೋಗ್ಯವಿಲ್ಲದ ರಾಗಿಯನ್ನು ಜನಸಾಮಾನ್ಯರಿಗೆ ವಿತರಿಸಲು ಹೊರಟಿದ್ದಾರೆ ಎಂದು ಜಿ.ಪಂನ ಮಾಜಿ ಉಪಾಧ್ಯಕ್ಷ ಮುದಿಮಡು ರಂಗಶಾಮಯ್ಯ ಆರೋಪಿಸಿದ್ದಾರೆ.
ಅವರು ಶಿರಾ ನಗರದ ಎಪಿಎಂಸಿ ಆವರಣದಲ್ಲಿರುವ ಗೋಡಾನ್ಗೆ ಭೇಟಿ ನೀಡಿ ಅಲ್ಲಿನ ರಾಗಿಯನ್ನು ಪರಿಶೀಲಿಸಿ ಮಾತನಾಡಿದರು. ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಆಹಾರ ನಿಗಮದ ಗೋಡಾನ್ಗೆ ಭೇಟಿ ನೀಡಿದ್ದೇನೆ. ಈ ರಾಗಿಯನ್ನು ಮನುಷ್ಯರು ತಿನ್ನಲು ಸಾಧ್ಯವಿಲ್ಲ. ಅಂತಹ ಕಳಪೆ ರಾಗಿ ದಾಸ್ತಾನು ಮಾಡಿದ್ದಾರೆ. ಕಳಪೆ ರಾಗಿಯ ಬಗ್ಗೆ ಪ್ರಶ್ನೆ ಮಾಡಿದರೆ ಅಧಿಕಾರಿಗಳು ಲಘುವಾಗಿ ಉತ್ತರ ನೀಡುತ್ತಾರೆ. ಕೂಡಲೇ ಕಳಪೆ ರಾಗಿಯನ್ನು ಬದಲಾಯಿಸಲು ತುರ್ತು ಕ್ರಮ ಕೈಗೊಳ್ಳಬೇಕು. ಹಾಗೂ ಈ ಇದೇ ರೀತಿಯ ಕಳಪೆ ರಾಗಿ ಖರೀದಿ ಮಾಡಿ ಮುಂದಿನ ದಿನಗಳಲ್ಲಿ ವಿತರಿಸಿದರೆ ಲೋಕಾಯುಕ್ತರಿಗೆ ಪತ್ರ ಬರೆಯುವುದಾಗಿ ತಿಳಿಸಿದರು.