ತುಮಕೂರು: 2005ರ ಪಾವಗಡ ವೆಂಕಟಮ್ಮನಹಳ್ಳಿ ಬ್ಲಾಸ್ಟ್ ಕೇಸ್ಗೆ ಸಂಬಂಧಿಸಿದಂತೆ ನಾಲ್ವರು ಮಾಜಿ ನಕ್ಸಲೀಯರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಪಾವಗಡ ತಾಲೂಕಿನ ನ್ಯಾಯಾಲಯದಲ್ಲಿ ಕೇಸ್ ನಡೆಯುತ್ತಿದೆ. ಆದರೆ ಕೋರ್ಟ್ ವಿಚಾರಣೆಗೆ ನೋಟಿಸ್ ನೀಡಿದ್ದರೂ ಪದೇ ಪದೇ ತನಿಖೆಗೆ ಗೈರಾಗುತ್ತಿದ್ದರು. ಕೋರ್ಟ್ ಸೂಚನೆ ಮೇರೆಗೆ 4 ಮಾವೋವಾದಿಗಳನ್ನು ಆಂಧ್ರ ಪ್ರದೇಶದ ವಿವಿಧ ಭಾಗದಲ್ಲಿ ಪತ್ತೆ ಹಚ್ಚಿ ಪಾವಗಡ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪಾವಗಡ ತಾಲೂಕಿನ ವೆಂಕಟಮ್ಮನಹಳ್ಳಿಯಲ್ಲಿ 2005ರಲ್ಲಿ ಬಾಂಬ್ ಬ್ಲಾಸ್ಟ್ ಆಗಿತ್ತು. ಇದೇ ಕೇಸ್ಗೆ ಸಂಬಂಧಿಸಿದಂತೆ ಒಟ್ಟು 16 ಜನರ ವಿರುದ್ಧ ಪ್ರಕರಣ ದಾಖಲಾಗಿತ್ತು. ಹೀಗಾಗಿ ನಾಲ್ಕು ಜನರನ್ನು ಮತ್ತೆ ವಶಕ್ಕೆ ಪಡೆದು ವಿಚಾರಣೆ ಮುಂದುವರಿಸಿದ್ದಾರೆ.
2005ರಲ್ಲಿ ಆಂಧ್ರಪ್ರದೇಶ ಮತ್ತು ಕರ್ನಾಟಕ ಗಡಿಯಾದ ಪಾವಗಡ ತಾಲೂಕಿನ ವೆಂಕಟಮ್ಮನಹಳ್ಳಿ ಮತ್ತು ತಿರುಮಣಿಯಲ್ಲಿ ನಕ್ಸಲ್ರ ಹಾವಳಿ ಹೆಚ್ಚಾದ ಹಿನ್ನೆಲ್ಲೆಯಲ್ಲಿ ವೆಂಕಟಮ್ಮನಹಳ್ಳಿಯಲ್ಲಿ 30 ಜನರ ಕೆಎಸ್ಆರ್ಪಿ ತುಕುಡಿಯನ್ನು ನಿಯೋಜಿಸಲಾಗಿತ್ತು. 2005ರ ಸೆಪ್ಟೆಂಬರ್ 10ರ ರಾತ್ರಿ 10:30ರ ಸುಮಾರಿಗೆ 300 ಜನ ನಕ್ಸಲ್ರು ಕೆಎಸ್ಆರ್ಪಿ ತುಕುಡಿ ಮೇಲೆ ದಾಳಿ ಮಾಡಿದ್ದರು. ಮಾತ್ರವಲ್ಲದೇ ಪೊಲೀಸ್ ಅಧಿಕಾರಿಯ ಎದೆಗೆ ನಕ್ಸಲ್ರು ಗುಂಡು ಹಾರಿಸಿದರು. ಪೊಲೀಸರು ತಂಗಿದ್ದ ಶಾಲೆಯ ಮೇಲೆ ಗ್ರೆನೆಡ್ ಬಾಂಬ್ ದಾಳಿ ಮಾಡಿದರು. ಈ ವೇಳೆ ಕೂಡ ಹಲವು ಅಧಿಕಾರಿಗಳು ಪ್ರಾಣ ಬಿಟ್ಟಿದ್ದರು.