ತುಮಕೂರು: ವಿಶ್ರಾಂತ ಮುಖ್ಯೋಪಾಧ್ಯಾಯರಾದ ಕಡಂಬಿಲ ಭೀಮ ಭಟ್ಟರ ಜೀವನ ಕಥನ ‘ಅನಾಮಧೇಯ ಅಧ್ಯಾಪಕನ ಆತ್ಮಚರಿತ್ರೆ’ ಪುಸ್ತಕ ಬಿಡುಗಡೆ ಕಾರ್ಯಕ್ರಮವು ಎಸ್.ಎಸ್. ಪುರಂನ ಕನ್ನಿಕಾ ಪರಮೇಶ್ವರಿ ದೇವಸ್ಥಾನದ ಸಭಾಂಗಣದಲ್ಲಿ ಸೆಪ್ಟೆಂಬರ್ 9ರಂದು ಸಂಜೆ 5-00 ಗಂಟೆಗೆ ನಡೆಯಲಿದೆ.
ತುಮಕೂರಿನ ಅಂಕುರ್ ಮೀಡಿಯಾ ಪಬ್ಲಿಕೇಶನ್ಸ್ ಪ್ರಕಟಿಸಿರುವ ಈ ಕೃತಿಯನ್ನು ಲೇಖಕಿ, ಯಕ್ಷಗಾನ ಕಲಾವಿದೆ ಆರತಿ ಪಟ್ರಮೆ ನಿರೂಪಿಸಿದ್ದಾರೆ.
ಹಿರಿಯ ವಿದ್ವಾಂಸ ಡಾ. ಎಸ್. ಪಿ. ಪದ್ಮಪ್ರಸಾದ್ ಕೃತಿ ಲೋಕಾರ್ಪಣೆ ಮಾಡಲಿದ್ದಾರೆ. ಹಿರಿಯ ಗಾಂಧಿ ಚಿಂತಕ ಎಲ್. ನರಸಿಂಹಯ್ಯ ತೊಂಡೋಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಕೃತಿಕಾರ ಕೆ. ಭೀಮ ಭಟ್ ಹಾಗೂ ಕೃತಿ ನಿರೂಪಕಿ ಆರತಿ ಪಟ್ರಮೆ ಭಾಗವಹಿಸಲಿದ್ದಾರೆ.
ಪುಸ್ತಕ ಬಿಡುಗಡೆ ಬಳಿಕ ‘ಯಕ್ಷದೀವಿಗೆ’ ನೇತೃತ್ವದಲ್ಲಿ ಹಲಸಿನಹಳ್ಳಿ ನರಸಿಂಹಶಾಸ್ತ್ರೀ ವಿರಚಿತ ‘ಭೀಷ್ಮ ವಿಜಯ’ ಎಂಬ ಯಕ್ಷಗಾನ ತಾಳಮದ್ದಳೆ ಜರುಗಲಿದೆ. ಹಿಮ್ಮೇಳದಲ್ಲಿ ಭಾಗವತರಾಗಿ ಪುತ್ತೂರು ರಮೇಶ ಭಟ್, ಚೆಂಡೆಯಲ್ಲಿ ಪಿ. ಜಿ. ಜಗನ್ನಿವಾಸ ರಾವ್, ಮದ್ದಳೆಯಲ್ಲಿ ಅವಿನಾಶ್ ಬೈಪಾಡಿತ್ತಾಯ ಹಾಗೂ ಮಿಹಿರ್ ಭಟ್ ಸರ್ಪಂಗಳ, ಚಕ್ರತಾಳದಲ್ಲಿ ಶ್ರೀಕೃಷ್ಣ ಜೆ. ರಾವ್ ಸಹಕರಿಸಲಿದ್ದಾರೆ.
ಮುಮ್ಮೇಳದಲ್ಲಿ ಅಂಬೆಯಾಗಿ ನಾ. ಕಾರಂತ ಪೆರಾಜೆ, ಭೀಷ್ಮನಾಗಿ ಸುಧನ್ವಾ ದೇರಾಜೆ, ಪರಶುರಾಮನಾಗಿ ಅಜಿತ್ ಕಾರಂತ, ಸಾಲ್ವನಾಗಿ ಆರತಿ ಪಟ್ರಮೆ, ವೃದ್ಧಬ್ರಾಹ್ಮಣನಾಗಿ ಸಿಬಂತಿ ಪದ್ಮನಾಭ, ಏಕಲವ್ಯನಾಗಿ ಸಂವೃತ ಶರ್ಮಾ ಪಾತ್ರನಿರ್ವಹಿಸಲಿದ್ದಾರೆ.