ತುಮಕೂರು : ಹುಡುಗಿ ವಿಚಾರಕ್ಕೆ ಸ್ನೇಹಿತರಿಬ್ಬರ ನಡುವೆ ಗಲಾಟೆ, ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ನಡೆದಿದೆ. ಕೊಲೆ ಮಾಡಿ ಅಪಘಾತದಲ್ಲಿ ಸಾವನ್ನಪ್ಪಿದ್ದಾನೆಂದು ಬಿಂಬಿಸಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮಧುಗಿರಿ ಪೊಲೀಸರಿಂದ ಓರ್ವ ರೌಡಿಶೀಟರ್ ಸೇರಿ 7 ಜನ ಆರೋಪಿಗಳ ಬಂಧನವಾಗಿದೆ. ಭರತ್, ಪವನ್, ತಿಪ್ಪೇಶ್, ಅನಿಲ್, ರೌಡಿಶೀಟರ್ ವೆಂಕಟೇಶ್ ಸೇರಿ 7 ಜನ ಬಂಧಿತ ಆರೋಪಿಗಳು.
ಕಳೆದ ಡಿ. 11 ರಂದು ಮಧುಗಿರಿಯ ಕರಡಿಪುರ ನಿವಾಸಿ ರವಿ (23) ಮೃತದೇಹ ಸಿಕ್ಕಿತ್ತು. ಪ್ರಕರಣ ಸಂಬಂಧ ರವಿ ಪಾಲಕರು ಅನುಮಾನ ವ್ಯಕ್ತಪಡಿಸಿ ಮಧುಗಿರಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರು ದಾಖಲಿಸಿಕೊಂಡ ಮಧುಗಿರಿ ಪೊಲೀಸರು ತನಿಖೆ ನಡೆಸಿದ್ದರು. ಈ ವೇಳೆ ಅಪಘಾತದ ರೀತಿಯಲ್ಲಿ ಬಿಂಬಿಸಿದ್ದ ಕೇಸ್, ಕೊಲೆ ಪ್ರಕರಣವಾಗಿ ಬೆಳಕಿಗೆ ಬಂದಿದೆ.
ರವಿ ಹಾಗೂ ಆರೋಪಿ ಭರತ್ ಮಧುಗಿರಿಯ ಕರಡಿಪುರ ಎಸ್,ಎಮ್, ಕೃಷ್ಣ ಬಡವಾಣೆ ನಿವಾಸಿಗಳು. ಆಟೋ ಓಡಿಸಿಕೊಂಡಿದ್ದ ರವಿ ಹಾಗೂ ಭರತ್ ಇಬ್ಬರೂ ಸ್ನೇಹಿತರು. ಇವರಿಬ್ಬರೂ ಒಬ್ಬಳನ್ನೇ ಪ್ರೀತಿಸುತ್ತಿದ್ದರು. ಈಕೆ ಅಪ್ರಾಪ್ತೆ. ರವಿ ಬಾಲಕಿ ಜತೆ ಓಡಿ ಹೋಗಿ ಮದುವೆಯಾಗಿದ್ದ. ಆದರೆ ಹುಡುಗಿ ಅಪ್ರಾಪ್ತೆಯಾದ ಕಾರಣ ಪೋಕ್ಸೋ ಕಾಯ್ದೆಯಡಿ ಜೈಲು ಸೇರಿ ಬಿಡುಗಡೆಯಾಗಿದ್ದ.
ಜೈಲಿನಿಂದ ಬಿಡುಗಡೆಯಾದ ಬಳಿಕ ರವಿ, ತನ್ನ ಸ್ನೇಹಿತರೊಡನೆ ಕಿರಿಕ್ ಮಾಡಿಕೊಂಡಿದ್ದ. ಅಲ್ಲದೇ ರೌಡಿಶೀಟರ್ ಒಬ್ಬನ ಪೋಟೋವನ್ನು ತನ್ನ ಮೊಬೈಲ್ನ ಸ್ಟೇಟಸ್ಲ್ಲಿ ಹಾಕಿಕೊಂಡಿದ್ದ. ಇದರಿಂದ ಭರತ್ ಮತ್ತಷ್ಟು ಕೆರಳಿದೆ.
ರೌಡಿಶೀಟರ್ ವೆಂಕಟೇಶ್ ಜೊತೆ ಸೇರಿ ಆಟೋವೊಂದರಲ್ಲಿ ರವಿಯನ್ನ ಮಧುಗಿರಿಯ ರಿಂಗ್ ರಸ್ತೆಯ ಬಳಿ ಕರೆದೊಯ್ದು, ಹಿಗ್ಗಾಮುಗ್ಗ ಥಳಿಸಿ ಕೊಲೆ ಮಾಡಲಾಗಿದೆ. ನಂತರ ಅಪಘಾತವಾಗಿದೆ ಎಂದು ಬಿಂಬಿಸಲು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸೋ ರೀತಿಯಲ್ಲಿ ನಾಟಕವಾಡಿದ್ದರು.
ರವಿ ಪೋಷಕರ ಆರೋಪದಂತೆ ಪೊಲೀಸರು ತನಿಖೆ ಕೈಗೊಂಡಾಗ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ಇದಾದ ಕೂಡಲೇ ಆರೋಪಿಗಳು ಗೋವಾದಲ್ಲಿ ತಲೆಮರಿಸಿಕೊಂಡಿದ್ದರು. ಸದ್ಯ ಆರೋಪಿಗಳನ್ನು ಮಧುಗಿರಿ ಪೊಲೀಸರು ಬಂಧಿಸಿದ್ದಾರೆ. ಎಲೆಮರಿಸಿಕೊಂಡಿರೋ ಇನ್ನುಳಿದ ನಾಲ್ವರು ಆರೋಪಿಗಳಿಗೆ ಶೋಧಕಾರ್ಯ ಮುಂದುವರೆದಿದೆ.