ತುಮಕೂರು: ಅಪಘಾತದಲ್ಲಿ ಮೃತಪಟ್ಟ ಪ್ರಿಯತಮ ಸಾವನ್ನು ಅರಗಿಸಿಕೊಳ್ಳಲಾಗದೇ ಪ್ರಿಯತಮೆ ಆತ್ಮಹತ್ಯೆ ಮಾಡಿಕೊಂಡಿರುವ ಮನಕಲಕುವ ಘಟನೆ ತುಮಕೂರು ಅರೆಹಳ್ಳಿಯಲ್ಲಿ ನಡೆದಿದೆ.
ಇನ್ನೇನು ಕೆಲವೇ ದಿನಗಳಲ್ಲಿ ಇವರಿಬ್ಬರ ಮದುವೆಯಾಗುವುದರಲ್ಲಿತ್ತು. ಎರಡು ವರ್ಷಗಳಿಂದ ಪ್ರೀತಿಸಿ ಮದುವೆಗೆ ಮನೆಯವರನ್ನೂ ಒಪ್ಪಿಸಿದ್ದ ಜೋಡಿ ಬಾಳಲ್ಲಿ ಜವರಾಯ ಅಟ್ಟಹಾಸ ಮೆರೆದಿದ್ದಾನೆ. ಮೇ 11ರಂದು ಹುಡುಗ ಮೃತಪಟ್ಟಿದ್ದು 14ರಂದು ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಧನುಷ್ (23), ಸುಷ್ಮಾ (22) ಮೃತ ದುರ್ದೈವಿಗಳು. ಮೇ 11ರಂದು ನೆಲಮಂಗಲ ಕುಲಾನಹಳ್ಳಿ ಬಳಿ ನಡೆದ ಅಪಘಾತದಲ್ಲಿ ಧನುಷ್ ಮೃತಪಟ್ಟಿದ್ದ. ಇವರು ತುಮಕೂರು ತಾಲೂಕಿನ ಮಸ್ಕಲ್ ಗ್ರಾಮದವರು, ಸಾವಿನ ಸುದ್ದಿಕೇಳಿ ಸುಷ್ಮಾ ಆಘಾತಗೊಂಡಿದ್ದಳು. ಪ್ರಿಯಕರನ ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಿದ್ದರು ಕೂಡ. ಆದರೆ ಅಂದಿನಿಂದ ಸುಷ್ಮಾ ಧುನುಷ್ ಸಾವಿನ ಯೋಚನೆಯಲ್ಲಿಯೇ ದುಃಖಿಸುತ್ತಿದ್ದಳು.
ಧನುಷ್ ಸಾವಿನಿಂದ ನೊಂದು ಈಗ ಆತ್ಮಹತ್ಯೆ ಹಾದಿ ತುಳಿದಿದ್ದಾಳೆ. ವಿಷ ಸೇವಿಸಿದ್ದ ಸುಷ್ಮಾಳನ್ನು ನಾಲ್ಕೈದು ಆಸ್ಪತ್ರೆಗಳಿಗೆ ಸೇರಿಸಲಾಯಿತಾದರೂ ಬದುಕಿ ಬರಲಿಲ್ಲ.
ಧನುಷ್ ಬೆಂಗಳೂರಿನಲ್ಲಿ ಸ್ವಂತ ಬಟ್ಟೆ ಅಂಗಡಿ ಇಟ್ಟುಕೊಂಡಿದ್ದರೆ, ಈಕೆ ಎಂಕಾಂ ವಿದ್ಯಾಭ್ಯಾಸ ಮಾಡುತ್ತಿದ್ದಳು. ಊರಿನ ಜಾತ್ರೆಗೆ ಬರುವ ವೇಳೆ ಅಪಘಾತ ನಡೆದು ಧನುಷ್ ಸ್ಥಳದಲ್ಲೇ ಸಾವನ್ನಪ್ಪಿದ್ದ. ಹೆಬ್ಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಹಾಯವಾಣಿಗೆ ಕರೆ ಮಾಡಿ:
ನೀವು ಆತ್ಮಹತ್ಯೆಯ ಯೋಚನೆ ಮಾಡುತ್ತಿದ್ದರೆ ಅಥವಾ ಅಂತವರ ಕುರಿತು ನಿಮಗೆ ತಿಳಿದಿದ್ದರೆ, ಸಹಾಯ ಅಗತ್ಯವಿರುವ ಯಾರಾದರೂ, ಕರೆ ಮಾಡಿ ಸುಶೇಗ್ ಚಾರಿಟಬಲ್ ಟ್ರಸ್ಟ್ 0824-2983444 ಗೆ ಏಕೆಂದರೆ ನಿಮ್ಮ ಜೀವನವು ಅಮೂಲ್ಯವಾದ್ದದ್ದು.