ತುಮಕೂರು : ‘ಹಿಂದೆ ಕೋವಿಡ್ ಲಸಿಕೆ ಇಲ್ಲ ಎನ್ನುತ್ತಿದ್ದರು. ಈಗ ಲಸಿಕೆ ಲಭ್ಯವಿದ್ದರೂ ಪಡೆದುಕೊಳ್ಳಲು ಮುಂದೆ ಬರುತ್ತಿಲ್ಲ. ಕೋವಿಡ್ ತಡೆಗಟ್ಟಲು ಎಲ್ಲರಿಗೂ ಲಸಿಕೆ ಹಾಕುವುದು ಅನಿವಾರ್ಯವಾಗಿದ್ದು, ಹಾಕಿಸಿಕೊಳ್ಳದವರಿಗೆ ಪಡಿತರ ನೀಡುವುದನ್ನು ಸ್ಥಗಿತಗೊಳಿಸುವಂತೆ ಈಗಾಗಲೇ ಸಲಹೆ ನೀಡಿದ್ದೇನೆ’ ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.
ಕೆಡಿಪಿ ಸಭೆಯಲ್ಲಿ ಮಂಗಳವಾರ ಮಾತನಾಡಿ, ‘ಲಸಿಕೆ ಹಾಕಿಸಿಕೊಳ್ಳದವರಿಗೆ ಪಡಿತರ ನೀಡದಿರುವ ನಿರ್ಧಾರವನ್ನು ಜಿಲ್ಲೆಯ ಮಟ್ಟಿಗಾದರೂ ತೆಗೆದುಕೊಳ್ಳಬೇಕಿದೆ. ಕೆಡಿಪಿ ಸಭೆ ಬುಧವಾರವೂ ಮುಂದುವರೆಯಲಿದ್ದು, ಸಭೆಯಲ್ಲಿ ಜಿಲ್ಲೆಯ ಶಾಸಕರು ಭಾಗವಹಿಸಲಿದ್ದಾರೆ. ಎಲ್ಲರ ಜತೆಗೂ ಚರ್ಚಿಸಿ ಅಂತಹದೊಂದು ಕಠಿಣ ನಿರ್ಧಾರ ಕೈಗೊಳ್ಳಬೇಕಿದೆ. ಜಿಲ್ಲೆಯಲ್ಲಿ ಇನ್ನೂ 5 ಲಕ್ಷ ಜನರು ಲಸಿಕೆ ಹಾಕಿಸಿಕೊಂಡಿಲ್ಲ’ ಎಂದರು.
ಕೋವಿಡ್ ಯಾವ ಸಮಯದಲ್ಲಿ ಬೇಕಾದರೂ ಹೆಚ್ಚಾಗಬಹುದು. ನಿಯಂತ್ರಿಸಲು ಈಗಿನಿಂದಲೇ ಕ್ರಮ ಕೈಗೊಳ್ಳದಿದ್ದರೆ ಮುಂದೆ ತೊಂದರೆ ಅನುಭವಿಸಬೇಕಾಗುತ್ತದೆ ಎಂದರು.