ಬೆಂಗಳೂರು: ಇಂದು ಮತ್ತು ನಾಳೆ ಬೆಂಗಳೂರಿನಲ್ಲಿ ವಿಪಕ್ಷಗಳ ಮಹಾ ಮೈತ್ರಿಕೂಟದ ಸಭೆ ನಡೆಯುವ ಹಿನ್ನೆಲೆ ಇಂದು ಬೆಂಗಳೂರಿಗೆ ಕಾಂಗ್ರೆಸ್ ನಾಯಕಿ ಸೋನಿಯಾ, ರಾಹುಲ್ ಗಾಂಧಿ ಆಗಮಿಸುತ್ತಿದ್ದಾರೆ. ಸೋನಿಯಾ ಗಾಂಧಿ ಜೊತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಕೂಡ ಆಗಮಿಸಲಿದ್ದಾರೆ.
ಸಭೆಯಲ್ಲಿ 24 ವಿಪಕ್ಷಗಳ 49 ನಾಯಕರು ಭಾಗವಹಿಸುವ ಸಾಧ್ಯತೆ ಇದೆ. ಅಲ್ಲದೇ ವಿಶೇಷ ವಿಮಾನದ ಮೂಲಕ ಉದ್ಧವ್ ಠಾಕ್ರೆ, ಹೇಮಂತ್ ಸೊರೇನ್, ಲಾಲೂ ಪ್ರಸಾದ್, ನಿತೀಶ್, ಶರದ್ ಪವಾರ್ ಕೂಡ ಆಗಮಿಸಲಿದ್ದಾರೆ. ಸುಮಾರು 24 ಪಕ್ಷಗಳಿಗೆ ಆಹ್ವಾನ ನೀಡಲಾಗಿದ್ದು, ಈ ಪೈಕಿ ಬಹುತೇಕರು ಸಭೆಗೆ ಹಾಜರಾಗುವ ಬಗ್ಗೆ ಖಚಿತಪಡಿಸಿದ್ದಾರೆ. ಎನ್ಸಿಪಿಯ ಶರದ್ ಪವಾರ್, ಆರ್ಜೆಡಿಯ ಲಾಲೂ ಪ್ರಸಾದ್ ಯಾದವ್, ತೇಜಸ್ವಿ ಯಾದವ್, ಎಸ್ಪಿಯ ಅಖಿಲೇಶ್ ಯಾದವ್, ತೃಣಮೂಲ ಕಾಂಗ್ರೆಸ್ನ ಮಮತಾ ಬ್ಯಾನರ್ಜಿ, ನ್ಯಾಷನಲ್ ಕಾನ್ಫರೆನ್ಸ್ನ ಓಮರ್ ಅಬ್ದುಲ್ಲಾ, ಆಪ್ನ ಅರವಿಂದ್ ಕೇಜ್ರಿವಾಲ್, ಪಿಡಿಪಿಯ ಮೆಹಬೂಬಾ ಮುಫ್ತಿ, ಎಡಪಕ್ಷಗಳ ಸೀತಾರಾಂ ಯೆಚೂರಿ, ಡಿಎಂಕೆಯ ಎಂ.ಕೆ.ಸ್ಟಾಲಿನ್ ಮುಂತಾದವರು ಭಾಗಿಯಾಗಲಿದ್ದಾರೆ.
ನಾನಾ ರಾಜಕೀಯ ಪಕ್ಷಗಳ ನಾಯಕರು ಇಂದು ಬೆಂಗಳೂರಿಗೆ ಆಗಮಿಸಲಿದ್ದಾರೆ. ಸಂಜೆ 7.30ಕ್ಕೆ ಸಿಎಂ ಸಿದ್ದರಾಮಯ್ಯ ಅವರು ಏರ್ಪಡಿಸಿರುವ ಭೋಜನಕೂಟದಲ್ಲಿ ಇವರೆಲ್ಲ ಮುಖಾಮುಖಿಯಾಗಲಿದ್ದಾರೆ ಎಂದು ವರದಿಯಾಗಿದೆ..