ಬೆಂ.ಗ್ರಾಮಾತರ : ನಕಲಿ ಚಿನ್ನವನ್ನು ಅಸಲಿ ಚಿನ್ನವೆಂದು ತೋರಿಸಿ ಮಾರಾಟ ಮಾಡುತ್ತಿದ್ದ ಗ್ಯಾಂಗ್ ನ್ನು ಸೆರೆ ಹಿಡಿಯುವಲ್ಲಿ ಹೊಸಕೋಟೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಹೊಸಕೋಟೆ ಪೊಲೀಸರ ಬಲೆಗೆ ಕೋಲಾರದ ಖತರ್ನಾಕ್ ಗ್ಯಾಂಗ್ ಬಿದ್ದಿದೆ. ಈ ಹಿಂದೆ ಹೊಸಕೋಟೆ, ನಂದಗುಡಿ, ಶಿಡ್ಲಘಟ್ಟದಲ್ಲಿ ಎಂಟು ಮಂದಿಗೆ 65 ಲಕ್ಷ ವಂಚನೆ ಮಾಡಿತ್ತು ಎಂದು ವಿಚಾರಣೆಯ ವೇಳೆ ಬಯಲಾಗಿದೆ.

ರಾಜೇಶ್‌ ಹಾಗೂ ಆತನ ಇಬ್ಬರು ಸಂಗಡಿಗರು ಬಂಧಿತ ಆರೋಪಿಗಳಾಗಿದ್ದಾರೆ. ಬೆಂಗಳೂರು ಹೊರಹೊಲಯವೇ ಇವರ ಟಾರ್ಗೆಟ್ ಏರಿಯಾಗಳಾಗಿದ್ದ, ತಾಲೂಕು ಕಚೇರಿ, ಹೋಟೆಲ್ ಗಳ ಬಳಿ ತೆಲುಗು ಭಾಷೆ ಮಾತನಾಡುವವರನ್ನೇ ಇವರು ಗುರಿಯಾಗಿರಿಸಿಕೊಳ್ಳುತ್ತಿದ್ದರೆಂದು ತಿಳಿದುಬಂದಿದೆ.

ಆತ್ಮೀಯ ಪರಿಚಿತರಂತೆ ಬಿಲ್ಡಪ್ ಕೊಟ್ಟು ಬ್ರೈನ್ ವಾಶ್ ಮಾಡುತ್ತಿದ್ದ ಈ ಗ್ಯಾಂಗ್‌, ಕೇರಳದ ಒಂದು ಜಾಗದಲ್ಲಿ ಭೂಮಿ ಕೆಲಸ ಮಾಡುವಾಗ ಚಿನ್ನದ ಹಾರ ಸಿಕ್ಕಿದೆ. ಅದು ರಾಜಮಹಾರಾಜರ ಕಾಲದ ಚಿನ್ನದ ಹಾರ, ಈಗಿನ ಚಿನ್ನದ ರೇಟಿಗಿಂತ ಹೆಚ್ಚು ಎಂದು ಬೂಸಿ ಬಿಡುತ್ತಿದ್ದರು.

ಹೀಗೆ ವ್ಯಕ್ತಿಗಳನ್ನ ಬ್ರೈನ್ ವಾಶ್ ಮಾಡಿ ಮೊಬೈಲ್ ನಲ್ಲಿ ನಕಲಿ ಚಿನ್ನದ ಹಾರವನ್ನು ತೋರಿಸುತ್ತಿದ್ದರು. ನಂಬಿಕೆ ಬರಲಿ ಅಂತ ಎರಡು ಚಿನ್ನದ ಅಸಲಿ ಗುಂಡುಗಳನ್ನ ತೋರಿಸಿ ಇದು ಸರದ ತುದಿಯ ಗುಂಡುಗಳು ಎಂದು ನಂಬಿಕೆ ಹುಟ್ಟಿಸುತ್ತಿದ್ದರು.

ಎಂಟು ಕೆಜಿ ಚಿನ್ನದ ಹಾರವನ್ನು ಕಡಿಮೆ ಬೆಲೆಗೆ ಕೊಡ್ತೇವೆಂದು ಯಾಮಾರಿಸಿ ಹಣ ಪಡೆದು ವಂಚಿಸಿ ಪರಾರಿಯಾಗುತ್ತಿದ್ದರು. ಎಲ್ಲಾ ಮೊಬೈಲ್ ನಲ್ಲೇ ತೋರಿಸಿ ವಿಡಿಯೋ ಕಾಲ್ ಮೂಲಕ ಜಾಗ ಫಿಕ್ಸ್‌ ಮಾಡುತ್ತಿದ್ದ ಈ ಗ್ಯಾಂಗ್‌   ನಕಲಿ ಚಿನ್ನದ ಸರವನ್ನು ಅಸಲಿ ಚಿನ್ನದ ಸರ ಅಂತ ಕೊಟ್ಟು ಎಸ್ಕೇಪ್ ಆಗುತ್ತಿದ್ದರೆಂದು ತಿಳಿದುಬಂದಿದೆ.

ಮನೆಗೆ ಹೋಗಿ ಚಿನ್ನವನ್ನು  ಪರಿಶೀಲಿಸಿದ್ದ ವ್ಯಕ್ತಿಗಳಿಗೆ ತಾವು ಬೇಸ್ತುಬಿದ್ದಿರುವುದು ಗೊತ್ತಾಗುತ್ತಿತ್ತು. ಮೋಸ ಹೋದ ವಿಷಯ ಗೊತ್ತಾಗಿ ಹೊಸಕೋಟೆ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು.