ಬೆಂಗಳೂರು: ಬಿಜೆಪಿ ಟಿಕೆಟ್ ವಂಚನೆ ಸಂಬಂಧ ಚೈತ್ರಾ ಕುಂದಾಪುರ ತಂಡದ ಬಂಧನ ಪ್ರಕರಣದಲ್ಲಿ ತಮ್ಮ ಹೆಸರನ್ನು ಬಳಸಿ ಸುಳ್ಳು ಸುದ್ದಿ ಹಬ್ಬಿಸಿ ತೇಜೋವಧೆ ಮಾಡುತ್ತಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿ ನಗರ ಪೊಲೀಸ್ ಆಯುಕ್ತರಿಗೆ ಪರಿಸರವಾದಿ ಹಾಗೂ ನಾಡೋಜ ಡಾ.ಸಾಲುಮರದ ತಿಮ್ಮಕ್ಕ ಬುಧವಾರ ಮನವಿ ಸಲ್ಲಿಸಿದರು.
ನಗರದ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಖುದ್ದು ತಿಮ್ಮಕ್ಕ ಅವರಿಂದ ಆಯುಕ್ತರ ಪರವಾಗಿ ಸಾರ್ವಜನಿಕ ಸಂಪರ್ಕಾಧಿಕಾರಿ ಹಾಗೂ ಎಸಿಪಿ ವೇಣುಗೋಪಾಲ್ ಮನವಿ ಸ್ವೀಕರಿಸಿದರು. ಬಿಜೆಪಿ ಟಿಕೆಟ್ ಹೆಸರಿನಲ್ಲಿ ಉದ್ಯಮಿಗೆ ವಂಚನೆ ಪ್ರಕರಣದಲ್ಲಿ ಚೈತ್ರಾ ಕುಂದಾಪುರ ಹಾಗೂ ಗಗನ್ ಕಡೂರು ಸೇರಿ ಇತರರು ಬಂಧಿತರಾಗಿದ್ದಾರೆ. ಆದರೆ ಈ ವಂಚನೆ ಕೃತ್ಯಕ್ಕೂ ನನಗೆ ಹಾಗೂ ನನ್ನ ಮಗ ಉಮೇಶ್ಗೆ ಯಾವುದೇ ಸಂಬಂಧವಿಲ್ಲ.
ಹೀಗಿದ್ದರೂ ಆ ಪ್ರಕರಣಕ್ಕೂ ನನ್ನ ಹಾಗೂ ನನ್ನ ಮಗನಿಗೂ ಸಂಬಂಧ ಇದೆ ಎಂದು ಅವಹೇಳನ ಮಾಡುತ್ತಿರುವುದು ಮನಸ್ಸಿಗೆ ನೋವುಂಟಾಗಿದೆ ಎಂದು ತಿಮ್ಮಕ್ಕ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ.