ರಾಮನಗರ: ಬಿಡದಿಯ ವಿಶ್ವಸಾಯಿ ವಿದ್ಯಾಸಂಸ್ಥೆಯಲ್ಲಿ ಆಯೋಜಿಸಿದ್ದ ಸುಗ್ಗಿ ಸಂಭ್ರಮ ಕಾರ್ಯಕ್ರಮದಲ್ಲಿ ಶಾಲೆಯ ವಿದ್ಯಾರ್ಥಿಗಳು ಗ್ರಾಮೀಣ ಸೊಗಡಿನ ವೇಷಭೂಷಣಗಳನ್ನು ಧರಿಸಿ ಸಂಭ್ರಮಿಸಿದರು.
ಬಿಡದಿ ಪಟ್ಟಣದ ಕೆ.ಹೆಚ್.ಬಿ ಬಡಾವಣೆಯಲ್ಲಿರುವ ವಿಶ್ವಸಾಯಿ ವಿದ್ಯಾಸಂಸ್ಥೆಯಲ್ಲಿ ನಡೆದ ಸುಗ್ಗಿ ಸಂಭ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿದ ಸಂಸ್ಥೆಯ ಗೌರವ ಅಧ್ಯಕ್ಷ ಚಿಕ್ಕಣ್ಣಯ್ಯ ಅವರು ಮಾತನಾಡಿ, ನಾಡಿನೆಲ್ಲೆಡೆ ಸಂಕ್ರಾಂತಿಯನ್ನು ಸಂಭ್ರಮ ಸಡಗರದಿಂದ ಆಚರಿಸಲಾಗಿದೆ. ಈ ಸಂದರ್ಭದಲ್ಲಿ ಪ್ರತಿವರ್ಷವೂ ವಿದ್ಯಾಸಂಸ್ಥೆಯಲ್ಲಿ ಸುಗ್ಗಿ ಹಬ್ಬವನ್ನು ವಿಶೇಷವಾಗಿ ಆಚರಿಸಲಾಗುತ್ತಿದ್ದು ಶಾಲೆಯ ಕೊಠಡಿಗಳನ್ನು ಸಿಂಗರಿಸಿ ಮಕ್ಕಳಲ್ಲಿ ಸುಗ್ಗಿ ಹಬ್ಬದ ಮೆರಗನ್ನು ಕಟ್ಟಿ ಕೊಡುವ ಕೆಲಸವನ್ನು ಶಾಲೆಯ ಆಡಳಿತ ಮಂಡಳಿ ಮಾಡುತ್ತಿದೆ. ಈ ಮೂಲಕ ಮಕ್ಕಳಿಗೆ ನಗರೀಕರಣ ವ್ಯಾಮೋಹವನ್ನು ದೂರವಿರಿಸಿ ಗ್ರಾಮೀಣ ಸೊಗಡನ್ನು ಉಣ ಬಡಿಸುವ ಕಾರ್ಯ ಮಾಡುತ್ತಿರುವುದು ಸಂತಸ ತಂದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಶಾಲೆಯ ಪ್ರಾಂಶುಪಾಲ ಶಿವರಾಜ್ಕುಮಾರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ರೈತರು ವರ್ಷಪೂರ್ತಿ ಕಷ್ಟಪಟ್ಟು ಬೆಳೆದ ಬೆಳೆಗಳನ್ನು ಒಕ್ಕಣೆ ಮಾಡಿ ಸುಗ್ಗಿಹಬ್ಬವನ್ನು ಆಚರಿಸುತ್ತಾರೆ. ಸಂಕ್ರಮಣದ ಕಾಲದಲ್ಲಿ ಸೂರ್ಯ ಹೊಸ ಪಥ ಬದಲಾವಣೆ ಮಾಡುವುದರಿಂದ ಜನರ ಬದುಕಿನಲ್ಲಿಯೂ ಕೆಲವು ಬದಲಾವಣೆಗಳಾಗುತ್ತವೆ. ಇಂತಹ ಸಂದರ್ಭದಲ್ಲಿ ಶಾಲೆಯಲ್ಲಿ ರಾಶಿಪೂಜೆ, ಗೋ-ಪೂಜೆ ಮಾಡಲಾಗುತ್ತದೆ. ಕಬ್ಬು, ಕಡಲೆಕಾಯಿ, ಅವರೆಕಾಯಿಯನ್ನು ಮಕ್ಕಳಿಗೆ ವಿತರಿಸಿ ನಮ್ಮ ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ಸಾಗಿದೆ. ಶಾಲೆಯ ಸಂಸ್ಥಾಪಕರ ಆಶಯದಂತೆ ಪ್ರತಿವರ್ಷವೂ ಸುಗ್ಗಿ ಸಂಭ್ರಮ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.
ಶಾಲಾ ಸಂಸ್ಥಾಪಕರಾದ ವರದರಾಜು, ಆಡಳಿತಾಧಿಕಾರಿ ಪ್ರಕಾಶ್, ಪ್ರಾಂಶುಪಾಲರಾದ ಶಿವರಾಜು, ಕುಮಾರ್.ಟಿ.ಆರ್, ಮುಖ್ಯಶಿಕ್ಷಕಿ ಸ್ವಪ್ನಡೆನಿಸ್, ಬೋಧಕರು, ಪೋಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಶಾಲಾ ಅಂಗಳದಲ್ಲಿ ಮಕ್ಕಳು ಬಿಡಿಸಿದ್ದ ರಂಗೋಲಿ ಚಿತ್ತಾರಗಳು, ರಾಶಿ ಪೂಜೆ, ಮಡಿಕೆಗೆ ಹಚ್ಚಿದ್ದ ವಿವಿಧ ಬಗೆಯ ಬಣ್ಣಗಳು ನೋಡುಗರ ಕಣ್ಮನ ಸೆಳೆದು ಪೋಷಕರ ಮೆಚ್ಚುಗೆಗೆ ಪಾತ್ರವಾದವು.