ರಾಮನಗರ: ನಮ್ಮ ಪಾರ್ಟಿ ನಿಂತ ನೀರಲ್ಲ, ಹೊಸ ಪ್ರಯೋಗ ಶೀಲತೆಗೆ ಹೆಚ್ಚು ಒತ್ತು ನೀಡುತ್ತದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.
ಮದ್ದೂರಿನಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಬೆಂಗಳೂರಿಗೆ ತೆರಳುವ ಮಾರ್ಗ ಮಧ್ಯೆ ರಾಮನಗರದ ಐಜೂರು ವೃತ್ತದಲ್ಲಿ ಸ್ಥಳೀಯ ಬಿಜೆಪಿ ಮುಖಂಡರಿಂದ ಗೌರವ ಸ್ವೀಕರಿಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಬಿಜೆಪಿ ವರಿಷ್ಠ ಸಂತೋಷ್ ಅವರು ಈ ಬಾರಿ ಹೊಸ ಮುಖಗಳಿಗೆ ಆಧ್ಯತೆ ಎಂದು ಹೇಳಿದ್ದಾರೆ ಎಂದು ಗಮನ ಸೆಳೆದಾಗ, ಹಳಬರು ಗೆಲ್ಲುವ ಜಾಗದಲ್ಲಿ ಅವರನ್ನು ಮುಂದುವರೆಸಲಾಗುತ್ತದೆ. ಹಾಗೆಯೇ ಹೊಸಬರಿಗೂ ಆಧ್ಯತೆ ನೀಡಲಾಗುವುದು. ನಿಂತ ನೀರಾದರೆ ಅದು ಮಲೀನವಾಗುತ್ತದೆ. ಹರಿಯುವ ನೀರಿನಲ್ಲಿ ಶುದ್ಧತೆ ಇರುತ್ತದೆ. ಪ್ರತಿ ಚುನಾವಣೆಯಲ್ಲೂ ಬಿಜೆಪಿ ಹೊಸ ಪ್ರಯತ್ನ ನಡೆಸುತ್ತದೆ ಎಂದರು.
ಮೈಸೂರು ಸಂಸದ ಪ್ರತಾಪ್ ಸಿಂಹ ಅವರನ್ನು ಉದಾಹರಣೆ ಕೊಟ್ಟ ಅವರು, ಪ್ರತಾಪ್ ಸಿಂಹ ಪತ್ರಕರ್ತರಾಗಿದ್ದರು. ಅವಕಾಶ ಕೊಟ್ಟೆವು. ಎರಡು ಬಾರಿ ಸಂಸದರಾಗಿದ್ದಾರೆ. ಹೀಗೆ ಪ್ರತಿ ಚುನಾವಣೆಯಲ್ಲೂ ಒಂದಷ್ಟು ಪರ್ಸಂಟೇಜ್ ಹೊಸ ಪ್ರಯೋಗಗಳಿಗೆ ಅವಕಾಶ ಕೊಡ್ತಾನೇ ಇರ್ತೀವಿ ಎಂದರು. ಸಂತೋಷ್ ಅವರು ಯಾವ ನಿರ್ಧಿಷ್ಟವಾದ ಕ್ಷೇತ್ರವನ್ನು ಉದ್ದೇಶಿಸಿ ಹೇಳಿಲ್ಲ, ಸಾರ್ವತ್ರಿಕವಾಗಿ ಹೇಳಿದ್ದಾರೆ. ಇಂಟರ್ನಲ್ ಸರ್ವೆ, ಎಕ್ಸ್ಟರ್ನಲ್ ಸರ್ವೆ ಇಟ್ಟುಕೊಂಡು ಅಂತಿಮವಾಗಿ ಕೋರ್ ಕಮಿಟಿಯಲಿ ಚರ್ಚೆ ಮಾಡಿ ಪಾರ್ಲಿಮೆಂಟರಿ ಬೋರ್ಡ್ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದರು.
ಈ ಬಾರಿ ಹಳಬರಿಗೆ ಕೋಕ್ ಸಾಧ್ಯವಿದೆಯೇ ಎಂಬ ಪ್ರಶ್ನೆಗೆ ಹೊಸಬೇರು, ಹಳೆ ಚಿಗುರು ಕೂಡಿರಲು ಮರ ಸೊಬಗು. ಋಷಿ ವಾಕ್ಯದೊಡನೆ, ವಿಜ್ಞಾನ ಮೇಳವಿಸಿ ಜಸವು ಜನ ಜೀವಕೆ ಮಂಕುತಿಮ್ಮ ಎಂದು ಡಿ.ವಿ.ಜಿ ಹೇಳಿದ್ದಾರೆ. ಹಾಗೆ ಬಿಜೆಪಿಯಲ್ಲಿ ಹೊಸಬರು, ಹಳಬರು ಇಬ್ಬರು ಇರುತ್ತಾರೆ ಎಂದರು.
ಚನ್ನಪಟ್ಟಣದಲ್ಲಿ ಪದೇ ಪದೇ ತಹಶೀಲ್ದಾರರ ವರ್ಗಾವಣೆ ವಿಚಾರ ತಮಗೆ ಗೊತ್ತಿರಲಿಲ್ಲ. ಈಗಷ್ಟೆ ಈ ವಿಚಾರ ಗೊತ್ತಾಗಿದೆ ಚನ್ನಪಟ್ಟಣದಲ್ಲಿ ಅಲ್ಪ ಸಮಯದಲ್ಲೇ ತಹಶೀಲ್ದಾರರ ವರ್ಗಾವಣೆ ಕುರಿತು ಜಿಲ್ಲಾ ಉಸ್ತುವಾರಿ ಸಚಿವರು, ಕಂದಾಯ ಸಚಿವರು ಹಾಗೂ ವಿಧಾನಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಬಳಿ ಚರ್ಚೆ ಮಾಡುವುದಾಗಿ ಹೇಳಿದರು.