ಬೆಂಗಳೂರು : ನಂದಿನಿ ಹಾಲಿನ ದರ ಏರಿಕೆ ನಿರ್ಧಾರ ಖಂಡಿಸಿ ರಾಜ್ಯದ ಹಲವೆಡೆ ಬಿಜೆಪಿ ವಿಭಿನ್ನವಾಗಿ ಪ್ರತಿಭಟನೆ ನಡೆಸಿತು. ರಸ್ತೆ ಮೇಲೆ ಹಸುಗಳನ್ನು ತಂದು, ರಸ್ತೆ ಮೇಲೆಯೇ ಹಾಲು ಕಾಯಿಸಿ, ಹೆಗಲ ಮೇಲೆ ನೇಗಿಲು-ಗುದ್ದಲಿ ಹೊತ್ಕೊಂಡು ಘೋಷಣೆ ಕೂಗಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಬೆಂಗಳೂರಿನ ಫ್ರೀಡಂಪಾರ್ಕ್ನಲ್ಲಿ ಬಿಜೆಪಿ ಕಾರ್ಯಕರ್ತರು ಹಸುಗಳನ್ನು ಕರೆತಂದು ಪ್ರತಿಭಟಿಸಿದರು. ಬಿಜೆಪಿ ರೈತ ಮೋರ್ಚಾ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಲಾಯಿತು. ಕೈಯಲ್ಲಿ ಹಾಲಿನ ಪ್ಯಾಕೆಟ್ ಹಿಡಿದು ಬಂದಿದ್ದ ಪ್ರತಿಭಟನಾಕಾರರು, ರಸ್ತೆ ತಡೆದು ಅಲ್ಲಿಯೇ ಹಾಲನ್ನ ಕಾಯಿಸಿದರು. ಆದರೆ, ವಿಪಕ್ಷ ನಾಯಕ ಆರ್.ಅಶೋಕ್ ಸೇರಿ ಬೆಂಗಳೂರಿನ ಬಿಜೆಪಿ ಶಾಸಕರು ಗೈರಾ ಎದ್ದು ಕಾಣಿಸಿತು.
ಅತ್ತ ಮಂಡ್ಯದಲ್ಲೂ ಬಿಜೆಪಿ ರೈತ ಮೋರ್ಚಾದಿಂದ ಸಂಜಯ್ ಸರ್ಕಲ್ನಲ್ಲಿ ಪ್ರತಿಭಟನೆ ನಡೆಸಲಾಯಿತು. ಹೆಗಲ ಮೇಲೆ ನೇಗಿಲು-ಗುದ್ದಲಿ ಹೊತ್ಕೊಂಡಿದ್ದ ಬಿಜೆಪಿ ಕಾರ್ಯಕರ್ತರು ಹಸುಗಳನ್ನ ಬಳಸಿ ರಸ್ತೆ ತಡೆ ನಡೆಸಿದರು. ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ ಪ್ರತಿಭಟನಾಕಾರರು ಹಳೇ ಬೆಂಗಳೂರು-ಮೈಸೂರು ಹೆದ್ದಾರಿ ತಡೆದರು.