ಬೆಂಗಳೂರು: ರಾಷ್ಟ್ರೀಯ ಸ್ವಯಂ ಸೇವಕ ಸೇರಿದಂತೆ ಹಿಂದು ಸಂಘಟನೆಗಳ ನಿಷೇಧ ಕುರಿತು ಸರ್ಕಾರ ಯೂ ಟರ್ನ್ ಹೊಡೆದಿದೆ. ಈ ನಿಟ್ಟಿನಲ್ಲಿ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ನೀಡಿದ್ದು, ಆರ್ಎಸ್ಎಸ್ ನಿಷೇಧಿಸುವ ಪ್ರಸ್ತಾಪ ಸರ್ಕಾರದ ಮುಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಸಮಾಜದಲ್ಲಿ ಶಾಂತಿ, ಸೌಹಾರ್ದತೆಗೆ ಧಕ್ಕೆ ತರುವ ಸಂಘಟನೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಆದರೆ ಆರೆಸ್ಸೆಸ್ ನಿಷೇಧಿಸುವ ಬಗ್ಗೆ ಕಾಂಗ್ರೆಸ್ ಪಕ್ಷ ಎಂದೂ ಮಾತನಾಡಿಲ್ಲ ಎಂದರು.
ಕಳೆದ ವಾರ ಆರ್ಎಸ್ಎಸ್ ನಿಷೇಧಿಸುವ ಕುರಿತು ಸಚಿವ ಪ್ರಿಯಾಂಕ್ ನೀಡಿದ್ದ ಹೇಳಿಕೆ ವಿವಾದ ಹುಟ್ಟುಹಾಕಿದ್ದು, ಈ ಹಿನ್ನೆಲೆಯಲ್ಲಿ ಸಿಎಂ ಹೇಳಿಕೆ ಮಹತ್ವ ಪಡೆದಿದೆ.
ಮೊನ್ನೆಯಷ್ಟೆ ಹೇಳಿಕೆ ನೀಡಿದ್ದ ಸಚಿವ ಖರ್ಗೆ ಬಜರಂಗದಳ, ಆರ್ಎಸ್ಎಸ್ ಸೇರಿದಂತೆ ಯಾವುದೇ ಸಂಘಟನೆಗಳು ನೈತಿಕ ಪೊಲೀಸ್ಗಿರಿಯಲ್ಲಿ ತೊಡಗಿದರೆ ನಾವು ನಿಷೇಧ ವಿಧಿಸಲು ಹಿಂದೆ ಮುಂದೆ ನೋಡುವುದಿಲ್ಲ ಎಂದು ಹೇಳಿದ್ದರು. ಅಲ್ಲದೆ ಬಿಜೆಪಿ ಸರ್ಕಾರ ಜಾರಿಗೆ ತಂದ ಹಲವು ಕಾನೂನುಗಳನ್ನು ಬದಲಾಯಿಸುತ್ತೇವೆ ಎಂದು ಹೇಳಿದ್ದರು.