ಬೆಂಗಳೂರು: ಕೇಂದ್ರದ ಹಣಕಾಸು ಮಂತ್ರಿಗಳಾದ ಶ್ರೀ ಮತಿ ನಿರ್ಮಲಾ ಸೀತಾರಮನ್ರವರು ಮಂಡಿಸಿರುವ ದಾಖಲೆಯ ಏಳನೇ ಬಜೆಟ್ ವಿತ್ತೀಯ ಶಿಸ್ತನ್ನು ಒಳಗೊಂಡ, ವಿಕಸಿತ ಭಾರತದ ಕಲ್ಪನೆಯನ್ನು ಸಾಕಾರಗೊಳಿಸಲು ಆಧ್ಯತೆ ನೀಡಿರುವ ಹಾಗೂ ಆತ್ಮ ನಿರ್ಭರತೆಯ ಕನಸನ್ನು ಪೂರ್ಣಗೊಳಿಸುವ ನಿಟ್ಟಿನಲ್ಲಿ ಒಂದು ಸ್ವಾಗತಾರ್ಹ ಪ್ರಯತ್ನವಾಗಿದೆ. ಸಮಾಜದ ಎಲ್ಲಾ ವರ್ಗಗಳಿಗೂ ನ್ಯಾಯನೀಡಿರುವ ಸಂತುಲಿತ ಬಜೆಟ್ಟನ್ನು ನೀಡಿರುವ ಶ್ರೀಮತಿ ನಿರ್ಮಲಾ ಸೀತಾರಮನ್ನ್ರವರ ಪ್ರಯತ್ನವನ್ನು ಸ್ವಾಗತಿಸುತ್ತೇನೆ.
ಆರ್ಥಿಕ ಸ್ಥಿರತೆ ಮತ್ತು ನಿರಂತರತೆಯನ್ನು ಪ್ರತಿಪಾದಿಸಿರುವ ಈ ಬಜೆಟ್ ಮೂರ ನೆಯ ಬಾರಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಮೋದಿ ನೇತೃತ್ವದ ಕೇಂದ್ರ ಸರಕಾರದ ಆತ್ಮವಿಶ್ವಾಸವನ್ನು ದಾಖಲಿಸಿದೆ. ಈ ಬಜೆಟ್ಟಿನಲ್ಲಿ ಒಂಬತ್ತು ಆಯ್ದ ಕ್ಷೇತ್ರಗಳಾದ ಕೃಷಿ, ಸಾಮಾಜಿಕ ನ್ಯಾಯ, ಉದ್ಯೋಗ ಮತ್ತು ಕೌಶಲ್ಯಾಭಿವೃದ್ದಿ, ಉತ್ಪಾದನೆ ಮತ್ತು ಸೇವಾಕ್ಷೇತ್ರ, ನಗರಾಭಿವೃದ್ದಿ, ಯುವಕರು, ಮಹಿಳೆಯರು ಮತ್ತು ರೈತ ಮೂಲಭೂತ ಸೌಕರ್ಯ ಹಾಗೂ ಭವಿಷ್ಯದ ಆರ್ಥಿಕ ಸುಧಾರಣೆಗಳನ್ನು ಆಧ್ಯತಾ ಕ್ಷೇತ್ರಗಳನ್ನಾಗಿ ಪರಿಗಣಿಸಿದ್ದು ದೇಶವನ್ನು ಪ್ರಗತಿಪಥದಲ್ಲಿ ಮುಂದೊಯ್ದು ವಿಶ್ವವಂದ್ಯಾ ಭಾರತವನ್ನಾಗಿಸುವಲ್ಲಿ ಮಾಡಿದ ಪ್ರಾಮಾಣಿಕ ಪ್ರಯತ್ನವಾಗಿದೆ.
ಶಿಕ್ಷಣ, ವಿದ್ಯಾರ್ಥಿಗಳ ಶೈಕ್ಷಣಿಕ ಅವಶ್ಯಕತೆಗಳು, ಯುವಕರಿಗಾಗಿ ಉದ್ಯೋಗ ಸೃಷ್ಟಿ, ಕೃಷಿ ಕ್ಷೇತ್ರದಲ್ಲಿನ ಸುದಾರಣೆ, ಕೃಷಿಕರ ಅವಶ್ಯಕತೆಗಳು, ಗ್ರಾಮೀಣ ಪ್ರದೇಶದಲ್ಲಿನ ಮೂಲಭೂತ ಸೌಕರ್ಯಗಳು ಮತ್ತು ಗೃಹ ನಿರ್ಮಾಣ, ನಗರದಲ್ಲಿನ ಬಡಜನರ ಅವಶ್ಯಕತೆಗಳು, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಸಹಾಯ, ಮಧ್ಯಮವರ್ಗದ ಜನರಿಗೆ ಅನುಕೂಲವಾಗುವಂತೆ ಆದಾಯ ತೆರಿಗೆ ದರದಲ್ಲಿ ರಿಯಾಯತಿ ಮೊದಲಾದ ಜನೋಪಯೋಗಿ, ಸರ್ವಸ್ಪರ್ಶಿ ಮತ್ತು ದೂರದೃಷ್ಟಿಯ ಬಜೆಟ್ಟನ್ನು ಸಾಗತಿಸುತ್ತೇನೆ.

