ಬೆಂಗಳೂರು: ರಾಜ್ಯದಲ್ಲಿ ನೀಟ್ ಪರೀಕ್ಷೆ ರದ್ದು ಮಾಡಬೇಕು ಎಂದು ಕಾಂಗ್ರೆಸ್ ಸದಸ್ಯ ಐವಾನ್ ಡಿಸೋಜಾ ಆಗ್ರಹಿಸಿದ್ದಾರೆ.
ವಿಧಾನ ಪರಿಷತ್ ಪ್ರಶ್ನೋತ್ತರ ಅವಧಿಯಲ್ಲಿ ನೀಟ್ ರದ್ದು ಮಾಡಲು ಒತ್ತಾಯ ಮಾಡಿದರು. ನೀಟ್ ಪರೀಕ್ಷೆಯಲ್ಲಿ ದೊಡ್ಡ ಅವ್ಯವಹಾರವಾಗಿದೆ. ಪೇಪರ್ ಲೀಕ್ ಆಗಿ 24 ಲಕ್ಷ ವಿದ್ಯಾರ್ಥಿಗಳ ಭವಿಷ್ಯ ಹಾಳಾಗಿದೆ. ನೀಟ್ ವ್ಯವಸ್ಥೆ ಫೆಲ್ಯೂರ್ ಸಿಸ್ಟಮ್. ಇದರಿಂದ ಮಕ್ಕಳಿಗೆ ಅನಾನುಕೂಲ. ಈ ಪರೀಕ್ಷೆಯಲ್ಲಿ ಸಾಮಾಜಿಕ ನ್ಯಾಯ ಇಲ್ಲ. ಹೀಗಾಗಿ ರಾಜ್ಯ ಸರ್ಕಾರ ನೀಟ್ ರದ್ದು ಮಾಡಬೇಕು. ತಮ್ಮದೇ ಪರೀಕ್ಷಾ ವ್ಯವಸ್ಥೆ ಜಾರಿ ಮಾಡಬೇಕು ಅಂತ ಆಗ್ರಹಿಸಿದರು.
ಇದಕ್ಕೆ ಸಚಿವ ಶರಣ ಪ್ರಕಾಶ್ ಪಾಟೀಲ್ ಉತ್ತರ ನೀಡಿ, ನೀಟ್ ಪರೀಕ್ಷೆಯಲ್ಲಿ ಅಕ್ರಮವಾಗಿದೆ. ಕೇಂದ್ರ ಸರ್ಕಾರ ಇದರಲ್ಲಿ ಎಡವಟ್ಟು ಮಾಡಿದೆ. ನೀಟ್ ಪರೀಕ್ಷೆ ಮಾಡುವುದರಲ್ಲಿ ಕೇಂದ್ರ ಎಡವಿದೆ. ಪೇಪರ್ ಲೀಕ್ ಆದಾಗ ನಾವು ತನಿಖೆ ಮಾಡಿ ಅಂತ ಆಗ್ರಹ ಮಾಡಿದ್ವಿ, ಕೇಂದ್ರ ಒಪ್ಪಲಿಲ್ಲ. ಬಳಿಕ ತಪ್ಪೊಪ್ಪಿಕೊಂಡು ಸಿಬಿಐ ತನಿಖೆಗೆ ಒಪ್ಪಿಸಿದೆ. ಸುಪ್ರೀಂ ಕೋರ್ಟ್ನಲ್ಲಿ ಕೇಸ್ ಇದೇ 18ಕ್ಕೆ ವಿಚಾರಣೆಯಿದೆ. ಏನು ತೀರ್ಮಾನ ಆಗುತ್ತದೆಯೋ ನೋಡೋಣ ಎಂದರು.
ನೀಟ್ ರದ್ದು ಮಾಡೋದು ಸಾಧ್ಯವಿಲ್ಲ. ನೀಟ್ ವ್ಯವಸ್ಥೆ ಸುಪ್ರೀಂ ಕೋರ್ಟ್ ಆದೇಶದಿಂದ ಆಗಿದೆ. ಕೇಂದ್ರ ಸರ್ಕಾರ ಇದನ್ನ ಕಾಯ್ದೆ ತಂದು ಮಾಡಿದೆ. ಇದನ್ನ ರದ್ದು ಮಾಡಲು ಸುಪ್ರೀಂ ಕೋರ್ಟ್ ಆದೇಶ ಮಾಡಬೇಕು. ಅಥವಾ ಕೇಂದ್ರ ಸರ್ಕಾರ ನಿರ್ಧಾರ ಮಾಡಬೇಕು ಎನ್ನುವ ಮೂಲಕ ನೀಟ್ ವ್ಯವಸ್ಥೆ ರದ್ದು ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.

