ಬೆಂಗಳೂರು: ಕಾಂಗ್ರೆಸ್ ಸರಕಾರ ವಿಧಾನಸೌಧದ ಆವರಣದಲ್ಲಿ ನಮಾಜ್ ಮಾಡಲು ಅನುಮತಿ ನೀಡಿದರೆ ದೊಡ್ಡ ಮಟ್ಟದ ಪ್ರತಿಭಟನೆ ನಡೆಸುವುದಾಗಿ ಶ್ರೀರಾಮಸೇನೆ ಶುಕ್ರವಾರ ಹೇಳಿದೆ.
ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ ಮುತಾಲಿಕ್, ನಮಾಜ್ಗೆ ಅನುಮತಿ ನೀಡಿದರೆ ವಿಧಾನಸೌಧದ ಆವರಣದಲ್ಲಿ ನಾವು ಪ್ರತಿದಿನ ಹನುಮಾನ್ ಚಾಲೀಸಾ ಪಠಿಸುತ್ತೇವೆ. ನಮಾಜ್ ಗೆ ಅನುಮತಿ ನೀಡಿದರೆ ಇಡೀ ಕರ್ನಾಟಕವೇ ಹೊತ್ತಿ ಉರಿಯಲಿದೆ ಎಂದು ಎಚ್ಚರಿಸಿದ ಅವರು ಕಾಂಗ್ರೆಸ್ ಪಕ್ಷವು ದೇಶವನ್ನು ಹೇಗೆ ನಾಶ ಮಾಡಿದೆ ಎಂಬುದು ಎಲ್ಲರಿಗೆ ಗೊತ್ತಿದೆ ಎಂದರು. ಇನ್ನು ಏಕರೂಪ ನಾಗರಿಕ ಸಂಹಿತೆ ಜಾರಿಯನ್ನು ಶ್ರೀರಾಮಸೇನೆ ಬೆಂಬಲಿಸುತ್ತದೆ ಎಂದ ಅವರು ಸಂಹಿತೆ ಜಾರಿಗಾಗಿ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಸಹಿ ಅಭಿಯಾನ ನಡೆಸುತ್ತೇವೆ ಎಂದರು. ಮಠಾಧೀಶರು, ವಕೀಲರು, ವೈದ್ಯರು ಮತ್ತು ಇತರ ಪ್ರಮುಖ ವ್ಯಕ್ತಿಗಳು ಅಭಿಯಾನಕ್ಕೆ ಚಾಲನೆ ನೀಡುತ್ತಾರೆ ಎಂದರು.
ಸಂವಿಧಾನದಲ್ಲಿ ಏಕರೂಪದ ಕಾನೂನನ್ನು ಉಲ್ಲೇಖಿಸಲಾಗಿದೆ ಆದರೆ ಅದು ಕಾರ್ಯರೂಪಕ್ಕೆ ಬಂದಿಲ್ಲ. ಕಳೆದ 20 ವರ್ಷಗಳಿಂದ ಏಕರೂಪದ ಕಾನೂನುಗಳ ಅನುಷ್ಠಾನದ ಬಗ್ಗೆ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಮಾತನಾಡುತ್ತಿದೆ ಆದರೆ ವಾಸ್ತವದಲ್ಲಿ ಅನುಷ್ಠಾನವಾಗುತ್ತಿಲ್ಲ. ಬೇರೆ ಯಾವುದೇ ದೇಶದಲ್ಲಿ ಎರಡು ರೀತಿಯ ಕಾನೂನುಗಳು ಅಸ್ತಿತ್ವದಲ್ಲಿ ಇಲ್ಲ. ಭಾರತದಲ್ಲಿ ಮಾತ್ರ ಕ್ರಮ ಇದೆ ಎಂದು ಮುತಾಲಿಕ್ ಗುಡುಗಿದರು.