ಬೆಂಗಳೂರು: ಕೇಕ್ ಕೊಡಿಸುವುದಾಗಿ ಆಸೆ ತೋರಿಸಿ ಬಾಲಕನೊಬ್ಬನನ್ನು ಕಿಡ್ನಾಪ್ ಮಾಡಿದ ಘಟನೆ ಎಲೆಕ್ಟ್ರಾನಿಕ್ ಸಿಟಿ ಸಮೀಪದ ದೊಡ್ಡತೋಗೂರು ಬಳಿ ಸೋಮವಾರ ಸಂಜೆ 6 ಸುಮಾರಿಗೆ ನಡೆದಿದೆ.
ರಾಜಸ್ಥಾನ ಮೂಲದ ಮಾರ್ವಾಡಿ ದಂಪತಿಯ 9 ವರ್ಷದ ಮಗನನ್ನು ಆರೋಪಿ ಮೊಹಮದ್ ಜಶಿಮುದ್ದೀನ್ ಶೇಕ್ (24) ಕಿಡ್ನಾಪ್ ಮಾಡಿದ್ದ. ಮನೆ ಬಳಿಯಿದ್ದ ಬಾಲಕನಿಗೆ ಕೇಕ್ ಕೊಡಿಸುವುದಾಗಿ ಆಸೆ ತೋರಿಸಿ ಕಿಡ್ನಾಪ್ ಮಾಡಿ 14 ಕಿ.ಮೀ ಸುತ್ತಾಡಿದ್ದಾನೆ. ಪೊಲೀಸರ ದಾರಿ ತಪ್ಪಿಸಲು ಹಲವು ಕಡೆ ಆಟೋದಲ್ಲಿ ಸುತ್ತಾಟ ನಡೆಸಿದ್ದಲ್ಲದೇ ಬಳಿಕ ಪೋಷಕರಿಗೆ ಕರೆ ಮಾಡಿ 10 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದಾನೆ.
ವೀರಸಂದ್ರ, ಹುಸ್ಕೂರು ಸುತ್ತಮುತ್ತ ಬಾಲಕನ ಜೊತೆ ಆರೋಪಿ ಓಡಾಟ ನಡೆಸಿದ್ದು, ಪದೇ ಪದೇ ಲೊಕೇಶನ್ ಬದಲಿಸುತ್ತಿದ್ದನು. ಕೊನೆಗೆ ಇಂದು ಬೆಳಗ್ಗೆ ಬಾಲಕ ಸಹಿತ ಆರೋಪಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಕೇವಲ 13 ಗಂಟೆಗಳಲ್ಲಿ ಬಾಲಕನನ್ನು ಪತ್ತೆಹಚ್ಚಿ ಪೋಷಕರಿಗೆ ಒಪ್ಪಿಸಿದ್ದಾರೆ. ಹಂತಕ ಬಾಲಕನಿಗೆ ಏನು ಮಾಡುತ್ತಾನೋ ಎನ್ನುವ ಆತಂಕದಿಂದ ಸೋಮವಾರ ಇಡೀ ರಾತ್ರಿ ನಿದ್ದೆ ಮಾಡದೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.
ಮೊಬೈಲ್ ಲೊಕೇಶನ್ ಸೇರಿ ಹಲವು ದಾಖಲೆಗಳನ್ನು ಇನ್ಸ್ಪೆಕ್ಟರ್ ರಾತ್ರಿಯೇ ಕಲೆ ಹಾಕಿದ್ದರು. ಇನ್ಸ್ಪೆಕ್ಟರ್ ನವೀನ್, ಪಿಎಸ್ಐ ಸಿದ್ದಪ್ಪ ಸೇರಿ ಹಲವು ಪೊಲೀಸರು ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.