ಬೆಂಗಳೂರು: ವಿಪಕ್ಷಗಳ ಮಹಾ ಮೈತ್ರಿಕೂಟಕ್ಕೆ ಇಂಡಿಯಾ ‘INDIA’ ಎಂಬ ಹೆಸರಿಡಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಭಾರತದ ಸಾರ್ವಭೌಮತ್ವ ಕಾಪಾಡುವ ನಿಟ್ಟಿನಲ್ಲಿ ಸಭೆ ಮಾಡಿದ್ದೇವೆ. ಈ ಸಭೆಯಲ್ಲಿ 26 ಪಕ್ಷಗಳ ನಾಯಕರು ಭಾಗಿಯಾಗಿದ್ದಾರೆ ಎಂದರು.
ಇದು ಅತ್ಯಂತ ಪ್ರಮುಖ ಸಭೆ ಆಗಿತ್ತು. ಪ್ರಜಾಪ್ರಭುತ್ವ ರಕ್ಷಣೆಗೆ ದೇಶದ ಜನರ ರಕ್ಷಣೆಗೆ ಅತ್ಯಗತ್ಯವಾಗಿತ್ತು. ಹೀಗಾಗಿ ನಾವೆಲ್ಲ ಒಂದುಗೂಡಿ ಒಂದೇ ಧ್ವನಿಯಲ್ಲಿ ನಿರ್ಣಯ ಕೈಗೊಂಡಿದ್ದೇವೆ. ಒಕ್ಕೂಟಕ್ಕೆ INDIA (Indian National Development Inclusive Alliance) ಎಂದು ಹೆಸರಿಟ್ಟಿದ್ದೇವೆ. ಮುಂದಿನ ಸಭೆ ಆಗಸ್ಟ್ 6ಕ್ಕೆ ಮುಂಬೈನಲ್ಲಿ ನಡೆಯಲಿದೆ. ಕ್ಯಾಂಪೇನ್ ಮ್ಯಾನೇಜ್ಮೆಂಟ್ ನಿರ್ಣಯಕ್ಕೆ ಉಪ ಸಮಿತಿ ರಚನೆ ಮಾಡಲಾಗುವುದು ಎಂದರು.
ಇನ್ನು ಎನ್ಡಿಎ ಸಭೆಯನ್ನು ಟೀಕಿಸಿದ ಮಲ್ಲಿಕಾರ್ಜುನ ಖರ್ಗೆ, ಎನ್ಡಿಎ ಮೈತ್ರಿಕೂಟದಲ್ಲಿ 30 ಪಕ್ಷಗಳಿವೆ, ಅದರ ಹೆಸರು ಗೊತ್ತಿಲ್ಲ. ಸದ್ಯ ತುಕುಡೆ ತುಕುಡೆಯಾಗಿರುವ ಮೈತ್ರಿ ಪಕ್ಷಗಳನ್ನು ಒಂದು ಮಾಡಲು ನರೇಂದ್ರ ಮೋದಿ ಪ್ರಯತ್ನಿಸುತ್ತಿದ್ದಾರೆ. ಬಿಜೆಪಿ ಸರ್ಕಾರ ಪ್ರಜಾಪ್ರಭುತ್ವ ನಾಶ ಮಾಡಲು ಹೊರಟಿದೆ. ಸಂವಿಧಾನ ನಾಶ ಮಾಡಲಿ ಹೊರಟಿದ್ದಾರೆ. ಸ್ವಾಯತ್ತ ಸಂಸ್ಥೆಗಳ ದುರ್ಬಳಕೆಮಾಡಿಕೊಂಡು ವಿಪಕ್ಷಗಳ ವಿರುದ್ದ ಆಯುಧವಾಗಿ ಬಳಸುತ್ತಿದ್ದಾರೆ. ದೇಶದ ರಕ್ಷಣೆ ನಮ್ಮ ಹೊಣೆ ಅದೇ ನಮ್ಮ ಮೊದಲ ಆದ್ಯತೆಯಾಗಿದೆ. ಎಲ್ಲ ಪಕ್ಷಗಳ ನಾಯಕರು ಇದಕ್ಕೆ ಸಲಹೆ ನೀಡಿದ್ದಾರೆ ಎಂದರು.