ಬೆಂಗಳೂರು: ಶನಿವಾರ ರಾತ್ರಿ ಮತ್ತು ಭಾನುವಾರ ಬೆಳಿಗ್ಗೆ ಬೆಂಗಳೂರಿನ ಅನೇಕ ಭಾಗಗಳಲ್ಲಿ ಭಾರಿ ಮಳೆಯಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.

ಭಾರೀ ಮಳೆಗೆ ಮನೆಗಳು ಮತ್ತು ವಸತಿ ಸಂಕೀರ್ಣಗಳು ಪ್ರವಾಹಕ್ಕೆ ಸಿಲುಕಿವೆ, ಕಾಂಪೌಂಡ್ ಗೋಡೆ ಕುಸಿದು ಅನೇಕ ದ್ವಿಚಕ್ರ ವಾಹನಗಳಿಗೆ ಹಾನಿಯಾಗಿದೆ, 15 ಮರಗಳು ಬುಡಮೇಲಾಗಿವೆ, 44 ಕೊಂಬೆಗಳು ಬಿದ್ದಿವೆ ಮತ್ತು ಅನೇಕ ರಸ್ತೆಗಳು ನದಿಗಳಾಗಿ ಮಾರ್ಪಟ್ಟಿವೆ.

ಸಾವಿರಾರು ನಿವಾಸಿಗಳನ್ನು ಹೊಂದಿರುವ ಯಲಹಂಕದ ಕೇಂದ್ರೀಯ ವಿಹಾರ್ ಅಪಾರ್ಟ್ಮೆಂಟ್ ಮೊಣಕಾಲು ಆಳದ ನೀರಿನಿಂದ ಪ್ರವಾಹಕ್ಕೆ ಸಿಲುಕಿದೆ.  ಸ್ವಯಂಸೇವಕರು ಹಾಲಿನ ಪ್ಯಾಕೆಟ್ ಗಳು, ನೀರಿನ ಬಾಟಲಿಗಳು ಮತ್ತು ಬ್ರೆಡ್ ಪ್ಯಾಕೆಟ್ ಗಳೊಂದಿಗೆ ಟ್ರ್ಯಾಕ್ಟರ್ ಅನ್ನು ಲೋಡ್ ಮಾಡಿ ನಿವಾಸಿಗಳಿಗೆ ವಿತರಿಸಿದರು. ಅಪಾರ್ಟ್ಮೆಂಟ್ ಮತ್ತು ಯಲಹಂಕ ಸರೋವರದ ನಡುವಿನ 50 ಅಡಿ ಕಾಂಪೌಂಡ್ ಗೋಡೆ ಕುಸಿದಿದ್ದರಿಂದ ಅಪಾರ್ಟ್ಮೆಂಟ್ ಪ್ರವಾಹಕ್ಕೆ ಸಿಲುಕಿದೆ ಎಂದು ಬಿಬಿಎಂಪಿ ತಿಳಿಸಿದೆ.